ರಾಜ್ಕೋಟ್: ರಣಜಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೆಣಸುತ್ತಿರುವ ಜಯದ ಆಸೆ ಕೈಬಿಟ್ಟಿರುವ ಸೌರಾಷ್ಟ್ರ ಮತ್ತು ಬಂಗಾಳ ತಂಡಗಳು, ಕೇವಲಇನಿಂಗ್ಸ್ ಮುನ್ನಡೆಗಾಗಿ ಛಲದಿಂದ ಹೋರಾಟ ಮುಂದುವರಿಸಿವೆ. ಇದಕ್ಕಾಗಿಬಂಗಾಳ71ರನ್ ಗಳಿಸಬೇಕಿದ್ದರೆ, ಸೌರಾಷ್ಟ್ರ ನಾಲ್ಕು ವಿಕೆಟ್ ಕಬಳಿಸಬೇಕಿದೆ.
ಇಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಸೌರಾಷ್ಟ್ರ ತಂಡ ಮೊದಲ ಇನಿಂಗ್ಸ್ನಲ್ಲಿ 434 ರನ್ ಗಳಿಸಿ ಆಲೌಟ್ ಆಗಿತ್ತು. ಈ ಮೊತ್ತ ಬೆನ್ನತ್ತಿರುವ ಬಂಗಾಳ ತಂಡ ಸದ್ಯ ಆರು ವಿಕೆಟ್ಗಳನ್ನು ಕಳೆದುಕೊಂಡು 354 ರನ್ ಗಳಿಸಿದೆ.ಇನ್ನೂ ಒಂದು ದಿನದ ಆಟ ಬಾಕಿಯಿದ್ದು, ಉಳಿದಿರುವ 4 ವಿಕೆಟ್ಗಳಿಂದ ಬಾಕಿ ಚುಕ್ತಾ ಮಾಡಬೇಕಿದೆ.
ದಿನದಿಂದ ದಿನಕ್ಕೆ ಸತ್ವ ಕಳೆದುಕೊಳ್ಳುತ್ತಿರುವ ಪಿಚ್ನಲ್ಲಿ ರನ್ ಗಳಿಕೆ ದುಸ್ತರವಾಗಿದೆ.ಆದರೂ ಬಂಗಾಳ ಬ್ಯಾಟ್ಸ್ಮನ್ಗಳು ತಾಳ್ಮೆಯಿಂದ ಆಡುತ್ತಿದ್ದಾರೆ. ಮೂರನೇ ದಿನದಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡು 134 ರನ್ ಗಳಿಸಿದ್ದ ಈ ತಂಡ, ನಾಲ್ಕನೇ ದಿನವೂ ಮೂರು ವಿಕೆಟ್ ಕಳೆದುಕೊಂಡು ಹೆಚ್ಚುವರಿಯಾಗಿ 220 ರನ್ ಸೇರಿಸಿದೆ.
ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ನಲ್ಲಿಶತಕ ಬಾರಿಸಿ ನೆರವಾಗಿದ್ದ ಅನುಸ್ತುಪ್ ಮಜುಂದಾರ್ ಕ್ರೀಸ್ನಲ್ಲಿದ್ದಾರೆ. 58 ರನ್ ಗಳಿಸಿರುವ ಅವರು, ಅರ್ನಬ್ ನಂದಿ (28) ಜೊತೆಗೆ ಆಡುತ್ತಿದ್ದಾರೆ.
ಈ ಬಾರಿ ಅತಿಹೆಚ್ಚು (65) ವಿಕೆಟ್ ಕಬಳಿಸಿದ ಬೌಲರ್ಎನಿಸಿರುವ ಸೌರಾಷ್ಟ್ರ ತಂಡದ ನಾಯಕ ಜಯದೇವ್ ಉನದ್ಕಟ್ಗೆ ಈ ಪಂದ್ಯದಲ್ಲಿ ಒಂದೂ ವಿಕೆಟ್ ಲಭಿಸದಿರುವುದುವಿಶೇಷ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.