ನವದೆಹಲಿ: ‘ವಿಶ್ವಕಪ್ ವೀಕ್ಷಿಸಲು 3ಡಿ ಕನ್ನಡಕ ಕಾಯ್ದಿರಿಸಿದ್ದೇನೆ...’ ಮುಂದಿನ ತಿಂಗಳು ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿರುವ ಬ್ಯಾಟ್ಸ್ಮನ್ ಅಂಬಟಿ ರಾಯುಡು ಮಂಗಳವಾರ ಹೀಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
33 ವರ್ಷದ, ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ಮನ್ ಅಂಬಟಿ ರಾಯುಡು ಅವರನ್ನು ಕೈಬಿಟ್ಟು ಆಲ್ರೌಂಡರ್ ವಿಜಯಶಂಕರ್ ಅವರಿಗೆ ಆಯ್ಕೆ ಸಮಿತಿ ಸ್ಥಾನ ನೀಡಿತ್ತು. ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ’ಅಂಬಟಿ ರಾಯುಡು ಅವರಿಗೆ ಈಗಾಗಲೇ ಹಲವು ಅವಕಾಶ ನೀಡಿದ್ದೇವೆ. ವಿಜಯ ಶಂಕರ್ ಮೂರೂ ಮಾದರಿಗಳಲ್ಲಿ ಸಮರ್ಥ ಆಟಗಾರ ಎನಿಸಿಕೊಂಡಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿ ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ನಲ್ಲಿ ಅವರು ಉತ್ತಮ ಸಾಮರ್ಥ್ಯ ತೋರಬಲ್ಲರು’ ಎಂದಿದ್ದರು.
ಭಾರತದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳನ್ನು ಹೊರತುಪಡಿಸಿದರೆ ಇತರ ಸರಣಿಗಳಲ್ಲಿ ರಾಯ್ಡು ಉತ್ತಮವಾಗಿ ಆಡಿದ್ದಾರೆ. 55 ಏಕದಿನ ಪಂದ್ಯಗಳಿಂದ 47.05 ಸರಾಸರಿಯಲ್ಲಿ ರನ್ ಗಳಿಸಿರುವ ಅವರು ನಾಲ್ಕನೇ ಕ್ರಮಾಂಕದಲ್ಲಿ ಆಡಬಲ್ಲ ಉತ್ತಮ ಬ್ಯಾಟ್ಸ್ಮನ್ ಆಗಿದ್ದರು.
ಗಂಭೀರ್ ಬೇಸರ
ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ರಾಯುಡು ಅವ ರನ್ನು ಪರಿಗಣಿ ಸದಿರುವುದು ದುರದೃಷ್ಟಕರ ಎಂದು ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.ಭಾರತ ತಂಡದ ನಾಲ್ಕನೇ ಕ್ರಮಾಂಕಕ್ಕೆ ರಾಯುಡು ಬಲ ತುಂಬಿದ್ದಾರೆ. ಅವರನ್ನು ಕೈಬಿಟ್ಟದ್ದು ಸರಿಯಲ್ಲ. ರಾಯುಡು ನಿರ್ಲಕ್ಷಿಸಿದಂತೆಯೇ 2007ರ ವಿಶ್ವಕಪ್ ಟೂರ್ನಿಯಲ್ಲಿ ನನ್ನನ್ನೂ ನಿರ್ಲಕ್ಷಿಸಲಾಗಿತ್ತು ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.