ADVERTISEMENT

ಐಪಿಎಲ್‌ ಪ್ರೆಷರ್ ಕುಕ್ಕರ್‌ನಂತೆ: ಆರ್‌ಸಿಬಿ ನಾಯಕ ಡುಪ್ಲೆಸಿ ಹೇಳಿಕೆ ಮರ್ಮವೇನು?

ಪಿಟಿಐ
Published 24 ಮೇ 2022, 6:06 IST
Last Updated 24 ಮೇ 2022, 6:06 IST
ಫಫ್ ಡುಪ್ಲೆಸಿ
ಫಫ್ ಡುಪ್ಲೆಸಿ    

ಕೋಲ್ಕತ್ತ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಾತಾವರಣ ಪ್ರೆಷರ್ ಕುಕ್ಕರ್‌ನಂತೆ ಒತ್ತಡದಿಂದ ಕೂಡಿರುತ್ತದೆ ಎಂದು ರಾಯಲ್ ಚಾಲೆಂಜರ್ಸ್ ನಾಯಕ ಫಫ್ ಡುಪ್ಲೆಸಿ ಹೇಳಿದ್ದಾರೆ.

ಇಂಥ ವಾತಾವರಣದಲ್ಲಿರುವಾಗ ಡ್ರೆಸ್ಸಿಂಗ್ ಕೊಠಡಿಯಲ್ಲಿ ಶಾಂತತೆ ಇರುವಂತೆ ನೋಡಿಕೊಳ್ಳುವುದೇ ಪ್ರಮುಖ ಹೊಣೆಗಾರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

‘ಕ್ರಿಕ್‌ಬಜ್’ ತಾಣಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಡ್ರೆಸ್ಸಿಂಗ್ ಕೊಠಡಿಯಲ್ಲಿ ವಿವೇಕವನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ಆಟಗಾರರು ಸನ್ನಿವೇಶಗಳಿಗೆ ಪ್ರತಿಕ್ರಿಯಿಸಬಾರದು. ಸರಿಯಾದ ಮಾನಸಿಕ ಚೌಕಟ್ಟಿನಲ್ಲಿ ಇರುವುದು ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಡ್ರೆಸ್ಸಿಂಗ್ ಕೊಠಡಿಯಲ್ಲಿ ಶಾಂತ ವಾತಾವರಣ ನಿರ್ಮಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ನೀವು ಯಾವಾಗಲೂ ಶಾಂತಚಿತ್ತರಾಗಿ ಇರಬೇಕಿದೆ. ಪ್ರೇಕ್ಷಕರು ತಪ್ಪು ಮಾಡಿದರೂ ನೀವು ನಿಮ್ಮ ಭಾವನೆಗಳನ್ನು ಅವರ ಎದುರು ಪ್ರಕಟಪಡಿಸಬೇಡಿ. ನಾವೆಲ್ಲರೂ ಭಾವನೆಗಳನ್ನು ಹೊಂದಿದ್ದೇವೆ ನಿಜ. ಆದರೆ ಆಟಗಾರರಾಗಿ ನಾವು ಭಾವನೆಯನ್ನು ತೋರಗೊಡಬಾರದು. ಇದರಿಂದ ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ. ಹೀಗಿದ್ದಾಗ ನೀವು ಸೋತರೂ ಗೆದ್ದರೂ ಸ್ಥಿರತೆ ಕಾಪಾಡಿಕೊಳ್ಳುವುದು ಸಾಧ್ಯ’ ಎಂದು ತಂಡದ ಆಟಗಾರರನ್ನು ಉದ್ದೇಶಿಸಿ ಡುಪ್ಲೆಸಿ ಹೇಳಿದ್ದಾರೆ.

‘ಸಕಾರಾತ್ಮಕ ಭಾವನೆಗಳು ಒಳ್ಳೆಯದು. ತಂಡದ ಆಟಗಾರರು ತಮ್ಮ ನಾಯಕ ದೃಢಚಿತ್ತನಾಗಿ ಇರಬೇಕೆಂದು ಬಯಸುತ್ತಾರೆ. ತಾನು ಸಹ ಅದೇ ರೀತಿ ಇರಲು ಬಯಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ.

ಲೀಗ್ ಹಂತದ 14 ಪಂದ್ಯಗಳನ್ನು ಆಡಿದ್ದ ಆರ್‌ಸಿಬಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ 16 ಅಂಕ ಗಳಿಸಿದೆ. ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ನಲ್ಲಿ ಬುಧವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಡುಪ್ಲೆಸಿ ನೇತೃತ್ವದ ತಂಡವು ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ವಿರುದ್ಧ ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.