ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಬೇರೆ ಬೇರೆ ತಂಡಗಳಲ್ಲಿ ಆಡುತ್ತಿರುವ ಕರ್ನಾಟಕದ ಪ್ರಮುಖ ಆಟಗಾರರು ಸ್ಥಾನ ಉಳಿಸಿಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಪವನ್ ದೇಶಪಾಂಡೆ, ಕಿಂಗ್ಸ್ ಇಲೆವನ್ ಪಂಜಾಬ್ ತಂಡದಲ್ಲಿ ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಕರುಣ್ ನಾಯರ್; ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕೆ. ಗೌತಮ್, ಶ್ರೇಯಸ್ ಗೋಪಾಲ್, ಸ್ಟುವರ್ಟ್ ಬಿನ್ನಿ; ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿ ರಾಬಿನ್ ಉತ್ತಪ್ಪ, ಪ್ರಸಿದ್ಧ ಎಂ ಕೃಷ್ಣ, ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮನೀಷ್ ಪಾಂಡೆ ಅವರು ಸ್ಥಾನ ಉಳಿಸಿಕೊಂಡಿದ್ದಾರೆ.
2019ರಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯಲ್ಲಿ ತಮ್ಮ ತಂಡಗಳನ್ನು ಮತ್ತಷ್ಟು ಬಲಿಷ್ಠಗೊಳಿಸಿಕೊಳ್ಳಲು ಫ್ರಾಂಚೈಸ್ಗಳು ಯೋಜನೆ ರೂಪಿಸಿವೆ. ಆರ್ಸಿಬಿ ತಂಡವು ಗುರುವಾರ ಅನಿರುದ್ಧ ಜೋಶಿ ಮತ್ತು ಇನ್ನಿತರ ಆರು ಆಟಗಾರರನ್ನು ಬಿಡುಗಡೆ ಮಾಡಿತ್ತು. ಮನದೀಪ್ ಸಿಂಗ್ ಮತ್ತು ಮಾರ್ಕಸ್ ಸ್ಟೋಯಿನಸ್ ಅವರನ್ನು ಸೇರ್ಪಡೆ ಮಾಡಿಕೊಂಡಿತ್ತು.
‘ಮುಂದಿನ ಟೂರ್ನಿಗಾಗಿ ತಂಡವನ್ನು ಕಟ್ಟುತ್ತಿದ್ದೇವೆ. ಅದಕ್ಕಾಗಿ ಮೂರು ಪ್ರಕಾರಗಳ ಆಯ್ಕೆ ಪ್ರಕ್ರಿಯೆ ನಡೆಸುತ್ತಿದ್ದೇವೆ. ಅಗ್ರಕ್ರಮಾಂಕದ ಬಲಿಷ್ಠ ಆಟಗಾರರ ತಂಡ, ಭಾರತೀಯ ಆಟಗಾರರಿಗೆ ಆದ್ಯತೆ ಮತ್ತು 19 ವರ್ಷದೊಳಗಿನವರ ವಿಭಾಗದ ಪ್ರತಿಭಾನ್ವಿತರನ್ನು ಸೇರ್ಪಡೆ ಮಾಡಿಕೊಳ್ಳಲಾಗುವುದು. ಭವಿಷ್ಯದಲ್ಲಿ ಶ್ರೇಷ್ಠ ಸಾಮರ್ಥ್ಯದ ತಂಡವನ್ನು ರೂಪಿಸುವುದು ನಮ್ಮ ಉದ್ದೇಶ’ ಎಂದು ಆರ್ಸಿಬಿ ಮುಖ್ಯಸ್ಥ ಸಂಜಯ್ ಚೂರಿವಾಲಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.