
ರಿಧಿಮಾ ಪಾಠಕ್
ಎಕ್ಸ್ ಚಿತ್ರ
ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಸಂಬಂಧವೇನೂ ಉತ್ತಮವಾಗಿಲ್ಲ. ಈ ವಿಚಾರ ಕ್ರಿಕೆಟ್ ಆಟದ ಮೇಲೂ ಪರಿಣಾಮ ಬೀರಿದೆ.
ಭಾರತದ ಕ್ರೀಡಾ ನಿರೂಪಕಿ ರಿಧಿಮಾ ಪಾಠಕ್ ಅವರನ್ನು ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನ ನಿರೂಪಣೆಯಿಂದ ಕೈಬಿಡಲಾಗಿದೆ ಎಂದು ಬಾಂಗ್ಲಾದೇಶದ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಇದೀಗ ಸ್ವತಃ ರಿಧಿಮಾ ಪಾಠಕ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಜನವರಿ 3 ರಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆದೇಶದಂತೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಬಾಂಗ್ಲಾದೇಶದ ವೇಗಿ ಮುಸ್ತಫಿಝುರ್ ರೆಹಮಾನ್ ಅವರನ್ನು ತಮ್ಮ ತಂಡದಿಂದ ಕೈಬಿಟ್ಟಿತ್ತು. ಇದರಿಂದ ಬಾಂಗ್ಲಾದೇಶ ಸರ್ಕಾರವು ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಸಾರದ ಮೇಲೆ ರಾಷ್ಟ್ರವ್ಯಾಪಿ ನಿಷೇಧವನ್ನು ಘೋಷಿಸಿತ್ತು. ಅಲ್ಲದೇ ಟಿ20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಐಸಿಸಿಗೆ ಮನವಿ ಸಲ್ಲಿಸಿತ್ತು.
ಈ ನಡುವೆ ಬಿಸಿಬಿ ನಡೆಸುವ ಬಿಪಿಎಲ್ನಿಂದ ನಿರೂಪಕಿ ಪಾಠಕ್ ಅವರನ್ನು ಕೈಬಿಡಲಾಗಿದೆ ಎಂದು ಬಾಂಗ್ಲಾದೇಶ ಮಾಧ್ಯಮಗಳು ವರದಿ ಮಾಡಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಠಕ್ ’ಹೊರಗುಳಿಯುವ ನಿರ್ಧಾರ ನನ್ನದೇ’ ಎಂದು ಹೇಳಿದ್ದಾರೆ.
’ಕಳೆದ ಕೆಲವು ಗಂಟೆಗಳಲ್ಲಿ, ನನ್ನನ್ನು ಬಿಪಿಎಲ್ನಿಂದ ಕೈಬಿಡಲಾಗಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಅದು ನಿಜವಲ್ಲ. ನಿರೂಪಣೆಯಿಂದ ಹೊರಬಂದಿದ್ದು, ನನ್ನ ವೈಯಕ್ತಿಕ ನಿರ್ಧಾರ. ನನಗೆ, ನನ್ನ ದೇಶ ಯಾವಾಗಲೂ ಮೊದಲು. ಕ್ರಿಕೆಟ್ ಅನ್ನು ಯಾವುದೇ ಗೌರವಿಸುತ್ತೇನೆ. ಪ್ರಾಮಾಣಿಕತೆ, ಗೌರವ ಮತ್ತು ಉತ್ಸಾಹದಿಂದ ಈ ಕ್ರೀಡೆಗೆ ವರ್ಷಗಳಿಂದ ಸೇವೆ ಸಲ್ಲಿಸುವ ಅವಕಾಶ ನನಗೆ ಸಿಕ್ಕಿದೆ. ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ಕ್ರಿಕೆಟ್ಗೆ ಸತ್ಯ ಬೇಕು. ಈ ಬಗ್ಗೆ ನನ್ನ ಕಡೆಯಿಂದ ಯಾವುದೇ ಹೆಚ್ಚಿನ ಪ್ರತಿಕ್ರಿಯೆಯಿಲ್ಲ’ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.