ADVERTISEMENT

ಬೇಡಿಕೆಯಿಂದ ಹಿಂದೆ ಸರಿಯಲು ಬೇಡಿಗೆ ಕೋರಿಕೆ: ರೋಹನ್‌ ಜೇಟ್ಲಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 13:24 IST
Last Updated 28 ಡಿಸೆಂಬರ್ 2020, 13:24 IST
ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ರೋಹನ್‌ ಜೇಟ್ಲಿ
ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ರೋಹನ್‌ ಜೇಟ್ಲಿ   

ನವದೆಹಲಿ: ಬಿಷನ್‌ ಸಿಂಗ್‌ ಬೇಡಿ ಅವರನ್ನು ‘ದೆಹಲಿ ಕ್ರಿಕೆಟ್‌ನ ಭೀಷ್ಮ’ ಎಂದು ಬಣ್ಣಿಸಿರುವದೆಹಲಿ ಮತ್ತು ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ರೋಹನ್‌ ಜೇಟ್ಲಿ ಅವರು, ಫಿರೋಜ್‌ ಷಾ ಕೋಟ್ಲಾದ ಸ್ಟ್ಯಾಂಡ್‌ಗೆ ಇಟ್ಟಿರುವ ಹೆಸರನ್ನು ಕಿತ್ತುಹಾಕಬೇಕೆಂಬ ಆಗ್ರಹದಿಂದ ಹಿಂದೆ ಸರಿಯುವಂತೆ ಸ್ಪಿನ್‌ ದಿಗ್ಗಜನನ್ನು ಸಂಸ್ಥೆಯು ಕೋರಲಿದೆ ಎಂದು ಸೋಮವಾರ ತಿಳಿಸಿದ್ದಾರೆ.

ಭ್ರಷ್ಟಾಚಾರ ಮತ್ತು ವಿವಾದಗ್ರಸ್ತವಾಗಿದೆ ಎಂದು ದೆಹಲಿ ಕ್ರಿಕೆಟ್‌ ಸಂಸ್ಥೆಯನ್ನು ಟೀಕಿಸಿದ್ದ ಬೇಡಿ ಅವರು, ಆಡಳಿತಗಾರನ ಬದಲು ಸ್ಫೂರ್ತಿದಾಯಕ ಆಟಗಾರನೊಬ್ಬನ ಪ್ರತಿಮೆಯನ್ನು ಅನಾವರಣಗೊಳಿಸಬೇಕಿತ್ತು ಎಂದಿದ್ದರು. ಕ್ರೀಡಾಂಗಣದ ಸ್ಟ್ಯಾಂಡ್‌ ಒಂದಕ್ಕೆ ಇಟ್ಟಿರುವ ತಮ್ಮ ಹೆಸರನ್ನು ತೆಗೆದುಹಾಕುವಂತೆಯೂ ಪತ್ರಮುಖೇನ ಒತ್ತಾಯಿಸಿದ್ದರು.

ಇತ್ತೀಚೆಗಷ್ಟೇ ಡಿಡಿಸಿಎ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ರೋಹನ್‌, ‘ಬೇಡಿ ಈ ವಿಷಯವನ್ನು ತಮ್ಮ ಜೊತೆ ವೈಯಕ್ತಿಕವಾಗಿ ಚರ್ಚಿಸುವುದಕ್ಕೆ ತಮ್ಮ ಸಹಮತವಿತ್ತು. ಅದನ್ನು ಬಿಟ್ಟು ತಮ್ಮ ತಂದೆಯ ಬಗ್ಗೆ ಕೀಳು ಅಭಿರುಚಿಯಿಂದ ಮಾತನಾಡಬಾರದಿತ್ತು’ ಎಂದು ಹೇಳಿದ್ದಾರೆ.

ಈ ಮಧ್ಯೆ ಸಂಸ್ಥೆಯು ತನ್ನ ಯೋಜನೆಯ ಪ್ರಕಾರ ಸೋಮವಾರ ಕೋಟ್ಲಾದಲ್ಲಿ ಕೇಂದ್ರದ ಮಾಜಿ ಸಚಿವ ದಿ. ಅರುಣ್‌ ಜೇಟ್ಲಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿತ್ತು. ಅರುಣ್‌ ಜೇಟ್ಲಿ ಕಳೆದ ವರ್ಷ ಬಹುಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.