ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪ್ರತಿಮೆಯನ್ನು ಬುಧವಾರ ಅನಾವರಣಗೊಳಿಸಲಾಯಿತು.
ಮುಂಬೈ ಮೂಲದವರೇ ಆದ ಸಚಿನ್, ಭಾರತದ ಕ್ರಿಕೆಟ್ ಏಳಿಗೆಯಲ್ಲಿ ಅಪಾರ ಕೊಡುಗೆಯನ್ನು ಸಲ್ಲಿಸಿದ್ದಾರೆ. ಇದೇ ಮೈದಾನದಲ್ಲಿ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದು ತಮ್ಮ ಕ್ರಿಕೆಟ್ ಪಯಣವನ್ನು ಸ್ಮರಣೀಯವಾಗಿಸಿದ್ದರು.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಚಿನ್, 'ಈ ಪ್ರತಿಮೆ ಕೇವಲ ನನಗೆ ಮಾತ್ರ ಸೇರಿದ್ದಲ್ಲ. ನನ್ನ ಪರವಾಗಿ ನಿಂತ ಪ್ರತಿಯೊಬ್ಬ ನಾನ್-ಸ್ಟ್ರೈಕರ್, ಕ್ರಿಕೆಟ್ ಹೀರೊಗಳು, ಸಹ ಆಟಗಾರರು, ಸಹೋದ್ಯೋಗಿಗಳಿಗೆ ನಾನು ಇದನ್ನು ಅರ್ಪಿಸುತ್ತೇನೆ. ಏಕೆಂದರೆ ಅವರಿಲ್ಲದೆ ಈ ಪ್ರಯಣ ಸಾಧ್ಯವಾಗುತ್ತಿರಲಿಲ್ಲ' ಎಂದು ಹೇಳಿದ್ದಾರೆ.
ವಾಂಖೆಡೆಯಲ್ಲಿನ ಅಪರೂಪದ ಚಿತ್ರವನ್ನು ಹಂಚಿಕೊಂಡಿರುವ ಸಚಿನ್, ಇಲ್ಲಿನ ಮೈದಾನದಲ್ಲಿ ಪ್ರತಿಮೆ ಅನಾವರಣದೊಂದಿಗೆ ಜೀವನವು ಪರಿಪೂರ್ಣವಾದಂತೆ ಭಾಸವಾಗುತ್ತಿದೆ ಎಂದು ಹೇಳಿದ್ದಾರೆ.
ವಾಂಖೆಡೆಗೆ ಭಾರತದ ಅಭಿಮಾನಿಯಾಗಿ ಕಾಲಿಟ್ಟ ಸಚಿನ್, ಬಳಿಕ 1987ರ ವಿಶ್ವಕಪ್ ವೇಳೆ ಬಾಲ್ ಬಾಯ್ ಆಗಿದ್ದನ್ನು ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿರುವುದನ್ನು ಸ್ಮರಿಸಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ನನ್ನ ಕೊನೆಯ ಪಂದ್ಯವನ್ನು ಇದೇ ಮೈದಾನದಲ್ಲಿ ಆಡಿದ್ದೇನೆ. ಇಲ್ಲಿನ ನೆನಪುಗಳನ್ನು ಮೆಲುಕು ಹಾಕಲು ಪದಗಳು ಸಾಲದು ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.