ADVERTISEMENT

ರಹಾನೆ ಪಡೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ

ಮುಂಬೈಗೆ ದೇಶಿ ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಪ್ರಶಸ್ತಿ; ಹಿಮಾಚಲಕ್ಕೆ ನಿರಾಶೆ

ಪಿಟಿಐ
Published 5 ನವೆಂಬರ್ 2022, 19:30 IST
Last Updated 5 ನವೆಂಬರ್ 2022, 19:30 IST
ತನುಷ್ ಕೋಟ್ಯಾನ್
ತನುಷ್ ಕೋಟ್ಯಾನ್   

ಕೋಲ್ಕತ್ತ: ದೇಶಿ ಕ್ರಿಕೆಟ್ ದಿಗ್ಗಜ ಮುಂಬೈ ತಂಡದ ಬಹುದಿನಗಳ ಕನಸು ಶನಿವಾರ ನನಸಾಯಿತು. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿತು.

41 ಬಾರಿ ರಣಜಿ ಟ್ರೋಫಿ ಸೇರಿದಂತೆ ಎಲ್ಲ ದೇಶಿ ಟೂರ್ನಿಗಳಲ್ಲಿಯೂ ಚಾಂಪಿಯನ್ ಆಗಿತ್ತು. ಆದರೆ ಇದುವರೆಗೆ ದೇಶಿ ಟಿ20 ಟ್ರೋಫಿ ಮಾತ್ರ ಒಲಿದಿರಲಿಲ್ಲ. ಇದೀಗ ಮುಂಬೈನ ಈ ಕೊರತೆಯೂ ನೀಗಿದೆ. ಶನಿವಾರ ಈಡನ್ ಗಾರ್ಡನ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ತನುಷ್ ಕೋಟ್ಯಾನ್ (15ಕ್ಕೆ3) ಅವರ ಉತ್ತಮ ಬೌಲಿಂಗ್‌ನಿಂದ ಮುಂಬೈ ತಂಡವು 3 ವಿಕೆಟ್‌ಗಳಿಂದ ಹಿಮಾಚಲಪ್ರದೇಶವನ್ನು ಸೋಲಿಸಿತು.

ಟಾಸ್ ಗೆದ್ದ ಮುಂಬೈ ತಂಡದ ಬೌಲರ್‌ಗಳಾದ ತನುಷ್ ಹಾಗೂ ಮೋಹಿತ್ ಅವಸ್ತಿ (21ಕ್ಕೆ3) ಹಿಮಾಚಲ ಪ್ರದೇಶದ ಬ್ಯಾಟರ್‌ಗಳಿಗೆ ಕಠಿಣ ಸವಾಲೊಡ್ಡಿದರು. ಹಿಮಾಚಲ ತಂಡವು ಏಕಾಂತ್ ಸೇನ್ (37; 29ಎಸೆತ, 4X3, 6X2) ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 143 ರನ್ ಗಳಿಸಿತು.

ADVERTISEMENT

ಸಾಧಾರಣ ಗುರಿ ಬೆನ್ನಟ್ಟಿದ ಮುಂಬೈ ತಂಡವು 19.3 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 146 ರನ್ ಗಳಿಸಿ ಜಯಿಸಿತು. ಶ್ರೇಯಸ್ ಅಯ್ಯರ್ (34; 26ಎ, 4X4, 6X1) ಹಾಗೂ ಸರ್ಫರಾಜ್ ಖಾನ್ (ಔಟಾಗದೆ 36; 31ಎ, 4X3, 6X1) ತಂಡದ ಗೆಲುವಿಗೆ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರು
ಹಿಮಾಚಲ ಪ್ರದೇಶ:
20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 143 (ನಿಖಿಲ್ ಗಂಗ್ತಾ 22, ಆಕಾಶ್ ವಸಿಷ್ಠ 25, ಏಕಾಂತ್ ಸೇನ್ 37, ಮಯಂಕ್ ದಾಗರ್ ಔಟಾಗದೆ 21, ಮೋಹಿತ್ ಅವಸ್ತಿ 21ಕ್ಕೆ3, ತನುಷ್ ಕೋಟ್ಯಾನ್ 15ಕ್ಕೆ3)

ಮುಂಬೈ: 19.3 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 146 (ಯಶಸ್ವಿ ಜೈಸ್ವಾಲ್ 27, ಶ್ರೇಯಸ್ ಅಯ್ಯರ್ 34, ಸರ್ಫರಾಜ್ ಖಾನ್ ಔಟಾಗದೆ 36, ವೈಭವ್ ಅರೋರಾ 27ಕ್ಕೆ3, ರಿಷಿ ಧವನ್ 26ಕ್ಕೆ2, ಮಯಂಕ್ ದಾಗರ್ 24ಕ್ಕೆ2)

ಫಲಿತಾಂಶ: ಮುಂಬೈ ತಂಡಕ್ಕೆ 3 ವಿಕೆಟ್‌ಗಳ ಜಯ ಮತ್ತು ಪ್ರಶಸ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.