ADVERTISEMENT

ಕೋವಿಡ್–19 | ₹ 42 ಲಕ್ಷ ದೇಣಿಗೆ ನೀಡಿದ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 13:13 IST
Last Updated 27 ಮಾರ್ಚ್ 2020, 13:13 IST
   

ಸೌರಾಷ್ಟ್ರ: ಜಾಗತಿಕ ಪಿಡುಗು ಕೋವಿಡ್‌–19 ನಿರ್ಮೂಲನೆ ಸಲುವಾಗಿ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯು (ಎಸ್‌ಸಿಎ) ₹ 42 ಲಕ್ಷ ದೇಣಿಗೆ ನೀಡಲು ನಿರ್ಧರಿಸಿದೆ. ಪ್ರಧಾನಮಂತ್ರಿ ಪರಿಹಾರ ನಿಧಿ ಹಾಗೂ ಗುಜರಾತ್‌ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ ₹ 21 ಲಕ್ಷ ನೀಡಲಿದೆ.

ಈ ಸಂಬಂಧ ಎಸ್‌ಸಿಎ ಪ್ರಕಟಣೆ ಹೊರಡಿಸಿದ್ದು ಅದರಲ್ಲಿ, ‘ಎಸ್‌ಸಿಎ ಭಾರತದ ನಾಗರೀಕರ ಬಗ್ಗೆ ಅಪಾರ ಕಾಳಜಿ ಹೊಂದಿದೆ. ಎಲ್ಲರೂ ಮನೆಯಲ್ಲಿಯೇ ಸುರಕ್ಷಿತವಾಗಿ ಇರುವಂತೆ ಮನವಿ ಮಾಡಿಕಕೊಳ್ಳುತ್ತೇವೆ’ ಎಂದು ತಿಳಿಸಿದೆ.

ಪಶ್ಚಿಮ ಬಂಗಾಳ ತುರ್ತು ಪರಿಹಾರ ನಿಧಿಗೆ ಬಂಗಾಳ ಕ್ರಿಕೆಟ್ ಸಂಸ್ಥೆ ₹ 25 ಲಕ್ಷ ಮತ್ತುಆ ಸಂಸ್ಥೆಯ ಮುಖ್ಯಸ್ಥ ಅವಿಶೇಕ್‌ ದಾಲ್ಮಿಯಾ ವೈಯಕ್ತಿಕವಾಗಿ ₹ 5 ಲಕ್ಷ ದೇಣಿಗೆ ನೀಡಿದ್ದಾರೆ. ಸೌರಾಷ್ಟ್ರ ಮತ್ತು ಬಂಗಾಳ ತಂಡಗಳು ಈ ಬಾರಿಯ (2019–20) ರಣಜಿ ಟೂರ್ನಿಯಲ್ಲಿ ಫೈನಲ್‌ ತಲುಪಿದ್ದವು. ಸೌರಾಷ್ಟ್ರ ಚಾಂಪಿಯನ್‌ ಆಗಿತ್ತು.

ADVERTISEMENT

ಮಾತ್ರವಲ್ಲದೆ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಪ್ರಧಾನಮಂತ್ರಿ ಪರಿಹಾರ ನಿಧಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 50 ಲಕ್ಷ ದೇಣಿಗೆ ನೀಡಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಸಂಕಷ್ಟದಲ್ಲಿರುವವರಿಗಾಗಿ ₹ 50 ಲಕ್ಷ ಮೌಲ್ಯದ ಅಕ್ಕಿ ನೀಡುವುದಾಗಿ ಘೋಷಿಸಿದ್ದಾರೆ. ಅಥ್ಲೀಟ್‌ಗಳಾದ ಭಜರಂಗ್‌ ಪೂನಿಯಾ ಹಾಗೂ ವೇಗದ ಓಟಗಾರ್ತಿ ಹಿಮಾ ದಾಸ್‌ ಅವರು ಮಾಸಿಕ ವೇತನ ನೀಡುವುದಾಗಿ ಹೇಳಿದ್ದಾರೆ.

ಕ್ರಿಕೆಟಿಗರಾದ ಯುಸೂಫ್‌ ಹಾಗೂ ಇರ್ಫಾನ್‌ ಪಠಾಣ್‌ ಅವರು 4 ಸಾವಿರ ಮುಖಗವಸುಗಳನ್ನು ಬರೋಡಾ ಪೊಲೀಸರಿಗೆ ನೀಡಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಪುಣೆ ಮೂಲದ ಎನ್‌ಜಿಒಗೆ ₹ 1 ಲಕ್ಷ ದೇಣಿಗೆ ನೀಡಿದ್ದಾರೆ.

ಕೋವಿಡ್‌–19 ಭೀತಿಯಿಂದಾಗಿ ಘೋಷಿಸಲಾಗಿರುವ ಲಾಕ್‌ಡೌನ್‌ ಆದೇಶವು ಏಪ್ರಿಲ್‌ 14ರ ವರೆಗೆ ಜಾರಿಯಲ್ಲಿರಲಿದೆ. ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಪೀಡಿತರ ಸಂಖ್ಯೆ 730ನ್ನು ದಾಟಿದೆ.ಭಾರತದಲ್ಲಿ ಇದುವರೆಗೆ ಒಟ್ಟು 17 ಜನರು ಮೃತಪಟ್ಟಿದ್ದಾರೆ. ಪ್ರಪಂಚದಾದ್ಯಂತ 5.3 ಲಕ್ಷಕ್ಕೂ ಹೆಚ್ಚು ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, 23 ಸಾವಿರ ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.