ಬೆಂಗಳೂರು: ಆರಂಭಿಕ ಬ್ಯಾಟರ್ ಮಯಂಕ್ ಅಗರವಾಲ್ ಅವರನ್ನು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಕರ್ನಾಟಕ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ.
ಕಳೆದ ಋತುವಿನಲ್ಲಿ ಮನೀಷ್ ಪಾಂಡೆ ನಾಯಕರಾಗಿದ್ದರು. ಆ ಟೂರ್ನಿಯಲ್ಲಿ ತಂಡವು ಫೈನಲ್ನಲ್ಲಿ ತಮಿಳುನಾಡು ವಿರುದ್ಧ ಸೋತಿತ್ತು. ಈ ಬಾರಿ ಯುವಪ್ರತಿಭೆಗಳಾದ ಮೈಸೂರಿನ ಬ್ಯಾಟರ್ ಎಲ್. ಆರ್. ಚೇತನ್ ಹಾಗೂ ವಿಕೆಟ್ಕೀಪರ್ ಲವನೀತ್ ಸಿಸೊಡಿಯಾ ಸ್ಥಾನ ಪಡೆದಿದ್ದಾರೆ. ಬಿರುಸಿನ ಹೊಡೆತಗಾರ ಅಭಿನವ್ ಮನೋಹರ್ ಸ್ಥಾನ ಗಳಿಸಿದ್ದಾರೆ. ಈಚೆಗೆ ಬಿಡುಗಡೆ ಮಾಡಿದ್ದ ಸಂಭವನೀಯರ ಪಟ್ಟಿಯಲ್ಲಿದ್ದ ರೋಹನ್ ಪಾಟೀಲ ಅವರಿಗೆ ಸ್ಥಾನ ಲಭಿಸಿಲ್ಲ.
ಅನುಭವಿ ಆಟಗಾರ ಕರುಣ್ ನಾಯರ್ ಅವರಿಗೆ ಸಂಭವನೀಯರ ತಂಡದಲ್ಲಿ ಸ್ಥಾನ ಕೊಟ್ಟಿರಲಿಲ್ಲ.
ಅ.11ರಿಂದ ಮೊಹಾಲಿಯಲ್ಲಿ ಟೂರ್ನಿಯು ನಡೆಯಲಿದೆ. ಕರ್ನಾಟಕವು ತನ್ನ ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರವನ್ನು ಎದುರಿಸಲಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸಂತೋಷ್ ಮೆನನ್ ಪ್ರಕಟಿಸಿರುವತಂಡ ಇಂತಿದೆ:
ಮಯಂಕ್ ಅಗರವಾಲ್ (ನಾಯಕ), ದೇವದತ್ತ ಪಡಿಕ್ಕಲ್, ಮನೀಷ್ ಪಾಂಡೆ, ಎಲ್.ಆರ್. ಚೇತನ್, ಅಭಿನವ್ ಮನೋಹರ್, ಮನೋಜ್ ಬಾಂಢಗೆ, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಜೆ. ಸುಚಿತ್, ಲವನೀತ್ ಸಿಸೊಡಿಯಾ (ವಿಕೆಟ್ಕೀಪರ್), ಬಿ.ಆರ್. ಶರತ್ (ವಿಕೆಟ್ಕೀಪರ್), ವಿ. ಕೌಶಿಕ್, ವೈಶಾಖ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ಎಂ. ವೆಂಕಟೇಶ್. ಪಿ.ವಿ. ಶಶಿಕಾಂತ್ (ಮುಖ್ಯ ಕೋಚ್), ದೀಪಕ್ ಚೌಗುಲೆ (ಫೀಲ್ಡಿಂಗ್ ಕೋಚ್), ಜಾಬ ಪ್ರಭು (ಫಿಸಿಯೊ), ಕೆ.ಸಿ. ಅವಿನಾಶ್ (ಸ್ಟ್ರೆಂಥ್–ಕಂಡಿಷನಿಂಗ್ ಕೋಚ್), ಅನುತೋಷ್ ಪೋಳ್ (ಮ್ಯಾನೇಜರ್), ಸಿ.ಎಂ. ಸೋಮಸುಂದರ್ (ಮಸಾಜ್ ತಜ್ಞ), ಎಂ.ಎಸ್. ವಿನೋದ್ ಕುಮಾರ್ (ವಿಡಿಯೊ ವಿಶ್ಲೇಷಕ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.