
ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್.
–ಪಿಟಿಐ ಚಿತ್ರ
ಕೋಲ್ಕತ್ತ: ಟಿ20 ವಿಶ್ವಕಪ್ನ ಸೂಪರ್–8ರ ನಿರ್ಣಾಯಕ ಪಂದ್ಯದಲ್ಲಿ ಭಾರತ ವಿರುದ್ಧ ಸೋತ ವೆಸ್ಟ್ ಇಂಡೀಸ್ ತಂಡವು ಟೂರ್ನಿಯಿಂದ ನಿರ್ಗಮಿಸಿದೆ. ಸೋಲಿನ ಕುರಿತು ಮಾತನಾಡಿದ ವಿಂಡೀಸ್ ನಾಯಕ ಶಾಯ್ ಹೋಪ್, ಸೋಲಿನ ಹೊಣೆಯನ್ನು ತಾವೇ ಹೊತ್ತುಕೊಂಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದಾಗ, ಬೃಹತ್ ಗುರಿ ನೀಡುವ ಜವಾಬ್ದಾರಿ ಇತ್ತು. ಅದರಂತೆ ವಿಂಡೀಸ್ ಬ್ಯಾಟರ್ಗಳು ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಆದರೆ, ನಾಯಕ ಶಾಯ್ ಹೋಪ್ ಮಾತ್ರ, ನಿಧಾನಗತಿಯ ಬ್ಯಾಟಿಂಗ್ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಈ ಕುರಿತು ಮಾತನಾಡಿದ ಅವರು, ಅಗ್ರಕ್ರಮಾಂಕದಲ್ಲಿ ತಾವು ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದು ಸೋಲಿಗೆ ಕಾರಣ ಎಂದಿದ್ದಾರೆ.
ವಿಂಡೀಸ್ ಪರ ಇನಿಂಗ್ಸ್ ಆರಂಭಿಸಿದ ಶಾಯ್ ಹೋಪ್ ಅವರು 33 ಎಸೆತಗಳಲ್ಲಿ ಕೇವಲ 32 ರನ್ ಗಳಿಸಿದರು. ಇದರಲ್ಲಿ 17 ಡಾಟ್ ಬಾಲ್ಗಳು ಸೇರಿವೆ. ಅವರ ನಿಧಾನಗತಿಯ ಬ್ಯಾಟಿಂಗ್ನಿಂದಾಗಿ ವಿಂಡೀಸ್ ತಂಡವು ಅಂತಿಮ ಗುರಿಯಲ್ಲಿ ಕನಿಷ್ಠ 20 ರನ್ಗಳ ಕೊರತೆ ಅನುಭವಿಸುವಂತಾಯಿತು.
ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಯ್ ಹೋಪ್ ‘ಹೌದು, ಸೋಲಿನ ಹೊಣೆಯನ್ನು ನಾನೇ ತೆಗೆದುಕೊಳ್ಳುತ್ತೇನೆ. ಅಗ್ರಕ್ರಮಾಂಕದಲ್ಲಿ ನಾನು ವೇಗವಾಗಿ ಬ್ಯಾಟಿಂಗ್ ಮಾಡಬೇಕಿತ್ತು‘ ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡರು.
‘ದೊಡ್ಡ ವೇದಿಕೆಯಲ್ಲಿ ಬ್ಯಾಟಿಂಗ್ ಮಾಡುವಾಗ ಅನೇಕರು ಕಷ್ಟಪಡುತ್ತಾರೆ. ನನಗೂ ಹಾಗೇ ಆಯಿತು. ನಾನು ಕೆಟ್ಟದಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ ಎಂದು ಹೇಳಲಾಗುವುದಿಲ್ಲ’ ಎಂದಿದ್ದಾರೆ.
‘ಮುಂದುವರೆದು ಮಾತನಾಡಿದ ಅವರು, ಆರಂಭದಲ್ಲಿ ಸೆಟ್ ಆಗಿ, ಮಧ್ಯಮ ಕ್ರಮಾಂಕದಲ್ಲಿ ಸ್ಪಿನ್ನರ್ಗಳ ಮೇಲೆ ದಾಳಿ ಮಾಡುವ ಯೋಜನೆ ಹೊಂದಿದ್ದೆ’ ಎಂದು ಅವರು ತಿಳಿಸಿದರು. ಅದಾಗ್ಯೂ, ಇನ್ನೂ 20 ರನ್ ಹೆಚ್ಚು ಗಳಿಸಿದ್ದರೆ ಗೆಲುವು ಸಾಧಿಸಬಹುದಿತ್ತು ಎಂಬುದನ್ನು ಅವರು ಒಪ್ಪಿಕೊಂಡರು.
ವೆಸ್ಟ್ ಇಂಡೀಸ್ ತಂಡವು ನಿಗದಿತ 20 ಓವರ್ಗಳಲ್ಲಿ 195 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ ತಂಡವು 19.2 ಓವರ್ಗಳಲ್ಲಿ ಗುರಿ ತಲುಪಿ ಸೆಮಿಫೈನಲ್ ಪ್ರವೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.