ಬೆಂಗಳೂರು: ಭಾರತದ ಕ್ರಿಕೆಟಿಗರೂ ತಮ್ಮ ವೃತ್ತಿ ಜೀವನದಲ್ಲಿ ಜನಾಂಗೀಯ ದ್ವೇಷದ ಬಿಸಿ ಅನುಭವಿಸಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ಕ್ರಿಕೆಟಿಗರಿಗೆ ಈ ಪಿಡುಗು ಹೆಚ್ಚು ಬಾಧಿಸಿದೆ.
ಅಮೆರಿಕದಲ್ಲಿ ಪೊಲೀಸರ ದೌರ್ಜನ್ಯಕ್ಕೆ ಜಾರ್ಜ್ ಫ್ಲಾಯ್ಡ್ ಬಲಿಯಾದ ನಂತರ ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಟ ಭುಗಿಲೆದ್ದಿದೆ. ಕ್ರಿಕೆಟ್ನಲ್ಲಿಯೂ ಇಂತಹ ತಾರತಮ್ಯದ ಕುರಿತು ವೆಸ್ಟ್ ಇಂಡೀಸ್ನ ದಿಗ್ಗಜ ಕ್ರಿಸ್ ಗೇಲ್ ಬಹಿರಂಗ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ತಮಿಳುನಾಡಿನ ಕ್ರಿಕೆಟಿಗ ಅಭಿನವ್ ಮುಕುಂದ್ ತಮ್ಮೊಂದಿಗೆ ನಡೆದ ಘಟನೆಯನ್ನು ಟ್ವೀಟ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕದ ಹಿರಿಯ ಕ್ರಿಕೆಟಿಗ ದೊಡ್ಡಗಣೇಶ್ ಕೂಡ ಅನುಭವ ಹಂಚಿಕೊಂಡಿದ್ದಾರೆ.
’2017ರಲ್ಲಿ ಶ್ರೀಲಂಕಾ ಟೆಸ್ಟ್ ಸರಣಿಯ ವೇಳೆ ಜನಾಂಗೀಯ ನಿಂದನೆಯನ್ನು ಎದುರಿಸಿದ್ದೆ. ನನ್ನ ಮೈಬಣ್ಣದ ಬಗ್ಗೆ ಮಾತನಾಡಿದವರನ್ನು ವಿರೋಧಿಸಿದ್ದೆ. ನಾವೂ ಮನುಷ್ಯರು ಎಂದು ಹೇಳಿದ್ದೆ‘ ಎಂದು ಅಭಿನವ್ ಬರೆದಿದ್ದಾರೆ. ಆಗ ಅವರು ಈ ಕುರಿತು ಪತ್ರ ಬರೆದಿದ್ದು ದೊಡ್ಡ ಸುದ್ದಿಯಾಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ದೊಡ್ಡಗಣೇಶ್, ’ಮುಕುಂದ್ ಪತ್ರ ನೋಡಿ 90ರ ದಶಕದಲ್ಲಿ ನಾನು ಅನುಭವಿಸಿದ ಘಟನೆಗಳು ನೆನಪಾದವು. ಆದರೆ ಅಂತಹ ಘಟನೆಗಳನ್ನು ನನ್ನನ್ನು ಬಹಳಷ್ಟು ಗಟ್ಟಿಗೊಳಿಸಿದವು. ಸದೃಢನಾದೆ‘ ಎಂದಿದ್ದಾರೆ.
ಈ ಟ್ವೀಟ್ಗಳು ಬಹಳಷ್ಟು ಚರ್ಚೆಗೆ ಗ್ರಾಸವಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.