ADVERTISEMENT

ಕ್ರಿಕೆಟಿಗ ಎಸ್. ಶ್ರೀಶಾಂತ್ ನಿವೃತ್ತಿ ಘೋಷಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಮಾರ್ಚ್ 2022, 15:49 IST
Last Updated 9 ಮಾರ್ಚ್ 2022, 15:49 IST
ಶ್ರೀಶಾಂತ್
ಶ್ರೀಶಾಂತ್   

ಕೊಚ್ಚಿ: ಬಲಗೈ ವೇಗದ ಬೌಲರ್ ಎಸ್. ಶ್ರೀಶಾಂತ್, ಎಲ್ಲ ಪ್ರಕಾರದ ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ 39 ವರ್ಷದ ಶ್ರೀಶಾಂತ್, ಯುವ ಆಟಗಾರರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

'ನನ್ನ ಕುಟುಂಬ, ನನ್ನ ಸಹ ಆಟಗಾರರು ಹಾಗೂ ಭಾರತೀಯರನ್ನು ಪ್ರತಿನಿಧಿಸುವುದು ನನಗೆ ಸಂದ ಗೌರವವಾಗಿದೆ. ತುಂಬಾ ದುಃಖದಿಂದ ಆದರೆ ಯಾವುದೇ ವಿಷಾದವಿಲ್ಲದೆ ಭಾರವಾದ ಹೃದಯದಿಂದ ನಾನಿದನ್ನು ಹೇಳುತ್ತೇನೆ. ನಾನು ದೇಶೀಯ ಕ್ರಿಕೆಟ್‌‍ಗೆ (ಪ್ರಥಮ ದರ್ಜೆ ಮತ್ತು ಎಲ್ಲ ಮಾದರಿ) ನಿವೃತ್ತಿ ಘೋಷಿಸುತ್ತೇನೆ' ಎಂದು ಹೇಳಿದ್ದಾರೆ.

ADVERTISEMENT

2013ರಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ ಪ್ರಕರಣದಲ್ಲಿ ಶ್ರೀಶಾಂತ್ ಅಜೀವ ನಿಷೇಧಕ್ಕೊಳಗಾಗಿದ್ದರು. ಬಳಿಕ ನಿಷೇಧ ಶಿಕ್ಷೆಯನ್ನು ಏಳು ವರ್ಷಕ್ಕೆ ಇಳಿಸಲಾಗಿತ್ತು. ಪ್ರಕರಣದಲ್ಲಿ ಶ್ರೀಶಾಂತ್ ದೋಷಮುಕ್ತಗೊಂಡಿದ್ದರು.

ಬಳಿಕ 2021 ಹಾಗೂ 2022ರಲ್ಲಿ ಐಪಿಎಲ್‌ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡರೂ ಮಾರಾಟಗೊಳ್ಳುವಲ್ಲಿ ವಿಫಲಗೊಂಡಿದ್ದರು. ಪ್ರಸಕ್ತ ಸಾಲಿನ ರಣಜಿ ಟ್ರೋಫಿಯಲ್ಲಿ ಕೇರಳ ತಂಡದ ಪರ ಆಡಿ ವಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು.

2007ರ ಟ್ವೆಂಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿರುವ ಶ್ರೀಶಾಂತ್ 27 ಟೆಸ್ಟ್ ಪಂದ್ಯಗಳಲ್ಲಿ 87 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗೆಯೇ 53 ಏಕದಿನಗಳಲ್ಲಿ 75 ವಿಕೆಟ್ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.