ADVERTISEMENT

ನಿಷೇಧ ಪೂರ್ಣಗೊಂಡ ಬಳಿಕ ಮೊದಲ ಬಾರಿ ಎಸ್‌. ಶ್ರೀಶಾಂತ್ ಕಣಕ್ಕೆ

ಕೇರಳ ಕ್ರಿಕೆಟ್‌ ಸಂಸ್ಥೆಯ ಪ್ರೆಸಿಡೆಂಟ್ಸ್ ಕಪ್‌ ಟಿ–20 ಟೂರ್ನಿಯಲ್ಲಿ ಆಡಲಿರುವ ವೇಗಿ

ಪಿಟಿಐ
Published 26 ನವೆಂಬರ್ 2020, 14:21 IST
Last Updated 26 ನವೆಂಬರ್ 2020, 14:21 IST
ಎಸ್‌.ಶ್ರೀಶಾಂತ್‌–ಪಿಟಿಐ ಚಿತ್ರ
ಎಸ್‌.ಶ್ರೀಶಾಂತ್‌–ಪಿಟಿಐ ಚಿತ್ರ   

ಕೊಚ್ಚಿ: ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗಿ ಎಸ್‌.ಶ್ರೀಶಾಂತ್‌ ಅವರು ಏಳು ವರ್ಷಗಳ ನಿಷೇಧದ ಬಳಿಕ ಮೊದಲ ಬಾರಿ ಕ್ರೀಡಾಂಗಣಕ್ಕಿಳಿಯಲು ಸಜ್ಜಾಗಿದ್ದಾರೆ. ಕೇರಳ ಕ್ರಿಕೆಟ್‌ ಸಂಸ್ಥೆಯ (ಕೆಸಿಎ) ಪ್ರೆಸಿಡೆಂಟ್ಸ್ ಕಪ್‌ ಟಿ–20 ಟೂರ್ನಿಯಲ್ಲಿ ಅವರು ಆಡಲಿದ್ದಾರೆ.

ಐಪಿಎಲ್‌ ಟೂರ್ನಿಯಲ್ಲಿ ಸ್ಪಾಟ್‌ ಫಿಕ್ಸಿಂಗ್ ನಡೆಸಿದ ಆರೋಪದಲ್ಲಿ ಬಿಸಿಸಿಐ ಶ್ರೀಶಾಂತ್ ಮೇಲೆ ಏಳು ವರ್ಷಗಳ ನಿಷೇಧ ಹೇರಿತ್ತು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಅವರ ನಿಷೇಧದ ಅವಧಿ ಪೂರ್ಣಗೊಂಡಿದೆ.

‘ಅಲಪ್ಪುಳದಲ್ಲಿ ನಡೆಯುವ ಟೂರ್ನಿಯಲ್ಲಿ ಶ್ರೀಶಾಂತ್‌ ಅವರು ಕೆಸಿಎ ಟೈಗರ್ಸ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕೇರಳ ರಾಜ್ಯ ತಂಡದ ನಾಯಕ ಸಚಿನ್‌ ಬೇಬಿ ಈ ತಂಡದ ಸಾರಥ್ಯ ವಹಿಸಲಿದ್ದಾರೆ‘ ಎಂದು ಕೆಸಿಎ ಅಧಿಕಾರಿಯೊಬ್ಬರು ಹೇಳಿದ್ದಾರೆ.

ADVERTISEMENT

’ಕೆಸಿಎ ರಾಯಲ್ಸ್, ಕೆಸಿಎ ಟೈಗರ್ಸ್, ಕೆಸಿಎ ಟಸ್ಕರ್ಸ್, ಕೆಸಿಎ ಈಗಲ್ಸ್, ಕೆಸಿಎ ಪ್ಯಾಂಥರ್ಸ್ ಹಾಗೂ ಕೆಸಿಎ ಲಯನ್ಸ್ ಹೆಸರಿನ ಆರು ತಂಡಗಳು ಟೂರ್ನಿಯಲ್ಲಿ ಸ್ಪರ್ಧಿಸಲಿವೆ‘ ಎಂದು ಕೇರಳ ಕ್ರಿಕೆಟ್‌ ಸಂಸ್ಥೆ ತಿಳಿಸಿದೆ.

ಶ್ರೀಶಾಂತ್‌, ಬೇಬಿ ಅವರನ್ನು ಹೊರತುಪಡಿಸಿ ಪ್ರಮುಖ ಆಟಗಾರರಾದ ಬಾಸಿಲ್‌ ಥಂಪಿ, ರೋಹನ್‌ ಪ್ರೇಮ್, ಮಿಥುನ್ ಎಸ್‌, ಕೆ.ಎಂ.ಆಸಿಫ್‌ ಕೂಡ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.