ADVERTISEMENT

ಕ್ರಿಕೆಟ್ ಆಡಲು ಪಾಕಿಸ್ತಾನ ಶೇ. 200 ರಷ್ಟು ಸುರಕ್ಷಿತ ಎಂದ ಶ್ರೀಲಂಕಾ ನಾಯಕ

ದಶಕದ ಬಳಿಕ ಪಾಕ್‌ನಲ್ಲಿ ನಡೆದ ಟೆಸ್ಟ್ ಸರಣಿ

ಏಜೆನ್ಸೀಸ್
Published 24 ಡಿಸೆಂಬರ್ 2019, 9:54 IST
Last Updated 24 ಡಿಸೆಂಬರ್ 2019, 9:54 IST
ದಿಮುತ್ ಕರುಣರತ್ನೆ
ದಿಮುತ್ ಕರುಣರತ್ನೆ   

ಕರಾಚಿ:ದಶಕಗಳ ಬಳಿಕ ಪಾಕಿಸ್ತಾನ ನೆಲದಲ್ಲಿ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1–0 ಅಂತರದಲ್ಲಿ ಸೋತರೂ, ಶ್ರೀಲಂಕಾ ತಂಡ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದೆ. ಪಾಕ್‌ ಪ್ರವಾಸ ಕುರಿತುಲಂಕಾ ನಾಯಕ ದಿಮುತ್ ಕರುಣರತ್ನೆ,ಟೆಸ್ಟ್‌ ಕ್ರಿಕೆಟ್ ಸರಣಿಗೆ ನಿಯೋಜಿಸಿದ್ದ ಭದ್ರತೆಯು ಶೇ. 200 ರಷ್ಟು ಉತ್ತಮವಾಗಿತ್ತು ಎಂದು ತಿಳಿಸಿದ್ದಾರೆ.

‘ಭದ್ರತೆಯು ಉತ್ತಮವಾಗಿತ್ತು. ರಕ್ಷಣಾ ಸಿಬ್ಬಂದಿ ನಮ್ಮ ಬಗ್ಗೆ ಸಾಕಷ್ಟು ಕಾಳಜಿ ವಹಿಸಿದರು. ಸುರಕ್ಷಿತವಾಗಿ ಕರೆದೊಯ್ಯುತ್ತಿದ್ದರು. ಯಾವಾಗಲೂ ನಮ್ಮ ಪಕ್ಕದಲ್ಲೇ ಇರುತ್ತಿದ್ದರು. ನಾವು ಯಾವುದೇ ಕಾರಣಕ್ಕಾಗಿ ಹೊರಗೆ ಹೋದರೂ, ರಕ್ಷಣಾ ಸಿಬ್ಬಂದಿಯೂ ಅಲ್ಲಿರುತ್ತಿದ್ದರು. ನಾವಿಲ್ಲಿ ಸುರಕ್ಷಿತವಾಗಿದ್ದೇವೆ ಎಂಬ ಭಾವನೆ ಮೂಡಿತ್ತು. ಅವರು ನಿಜವಾಗಿಯೂ ಉತ್ತಮ ಕೆಲಸ ಮಾಡಿದ್ದಾರೆ. ಪಾಕಿಸ್ತಾನ ಅಭಿಮಾನಿಗಳೂ ಒಳ್ಳೆಯವರು. ಸದಾ ನಮ್ಮನ್ನು ಬೆಂಬಲಿಸುತ್ತಿದ್ದರು’ ಎಂದು ಹೇಳಿಕೊಂಡಿದ್ದಾರೆ.

‘ಇಲ್ಲಿ (ಪಾಕಿಸ್ತಾನ) ಭದ್ರತೆಯ ವಾತಾವರಣವಿದೆ. ಬೇರೆ ದೇಶದ ತಂಡಗಳೂ ಇಲ್ಲಿಗೆ ಬಂದು ಟೆಸ್ಟ್‌, ಏಕದಿನ ಇಲ್ಲವೇ ಟಿ20 ಪಂದ್ಯಗಳನ್ನು ಆಡಬಹುದು.ಕ್ರಿಕೆಟ್ ಆಡಲು ಪಾಕ್‌ ಸುರಕ್ಷಿತವಾಗಿದೆ ಎನ್ನಲು ಬಯಸುತ್ತೇನೆ’ ಎಂದಿದ್ದಾರೆ.

ADVERTISEMENT

2009ರಲ್ಲಿ ಶ್ರೀಲಂಕಾ ಆಟಗಾರರಿದ್ದ ಬಸ್‌ ಮೇಲೆ ಲಾಹೋರ್‌ನಲ್ಲಿ ಉಗ್ರರು ದಾಳಿ ನಡೆಸಿದ್ದರು. ಆ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಬೇರೆ ದೇಶದ ತಂಡಗಳು ಹಿಂದೇಟು ಹಾಕಿದ್ದವು. ಪಾಕ್‌ ತಂಡ ತಟಸ್ಥ ಸ್ಥಳಗಳಲ್ಲಿ ಆಡಬೇಕಿತ್ತು. ಈ ನಡುವೆ ಏಕದಿನ ಮತ್ತು ಟಿ20 ಸರಣಿಗಳನ್ನು ಆಯೋಜಿಸಲಾಗಿತ್ತಾದರೂ ಟೆಸ್ಟ್‌ ಸರಣಿ ಆಯೋಜಿಸಲು ಸಾಧ್ಯವಾಗಿರಲಿಲ್ಲ.

ಸದ್ಯ ಮುಕ್ತಾವಾದ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಡ್ರಾ ಕಂಡಿತ್ತು. ಎರಡನೇ ಪಂದ್ಯವನ್ನು ಪಾಕಿಸ್ತಾನ ತಂಡ263 ರನ್‌ ಅಂತರದಿಂದ ಗೆದ್ದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.