ನವದೆಹಲಿ: ಭಾರತದ ಹಿರಿಯ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಅವರು ಕೋವಿಡ್ ಪಿಡುಗಿನ ವಿರುದ್ಧದ ಸಮರಕ್ಕೆ ಕೈ ಜೋಡಿಸಿದ್ದಾರೆ. ಮಂಗಳ ವಾರ ಅವರು ₹ 59 ಲಕ್ಷ ದೇಣಿಗೆ ನೀಡಿರುವುದು ವರದಿಯಾಗಿದೆ. ಟೆಸ್ಟ್ ಪರಿಣತ ಚೇತೇಶ್ವರ ಪೂಜಾರ ಕೂಡ ಸಹಾಯಹಸ್ತ ಚಾಚಿದ್ದಾರೆ.
ಗಾವಸ್ಕರ್, ದೇಣಿಗೆ ನೀಡಿರು ವುದನ್ನು ತಾವಾಗಿ ಹೇಳಿಕೊಂಡಿಲ್ಲ. ಆದರೆ ಮುಂಬೈ ತಂಡದ ಮಾಜಿ ನಾಯಕ ಅಮೋಲ್ ಮಜುಂದಾರ್ ಈ ಕುರಿತು ಟ್ವೀಟ್ ಮಾಡಿದ ಬಳಿಕ ವಿಷಯ ಬೆಳಕಿಗೆ ಬಂದಿದೆ.
‘ಕೋವಿಡ್ ಪರಿಹಾರ ನಿಧಿಗೆ ಎಸ್ಎಮ್ಜಿ (ಸುನಿಲ್ ಗಾವಸ್ಕರ್) ₹ 59 ಲಕ್ಷ ನೀಡಿದ್ದಾಗಿ ತಿಳಿದುಕೊಂಡೆ. ‘ಪಿಎಂ ಕೇರ್ಸ್ ನಿಧಿಗೆ ₹35 ಲಕ್ಷ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹24 ಲಕ್ಷ. ವಂದನೆಗಳು ಸರ್’ ಎಂದು ಅಮೋಲ್ ಹೇಳಿದ್ದಾರೆ.
ಸುನಿಲ್ ಪುತ್ರ ರೋಹನ್ ಈ ಬಗ್ಗೆ ಟ್ವೀಟ್ನಲ್ಲಿ ವಿವರ ನೀಡಿದ್ದಾರೆ. ಕಳೆದ ವಾರ ಈ ದೇಣಿಗೆ ನೀಡಲಾಯಿತು.
‘ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂದಾಳತ್ವ ವಹಿಸಿ ಸೆಣಸುತ್ತಿರುವ ವೈದ್ಯರು, ಅರೆ ವೈದ್ಯ ಸಿಬ್ಬಂದಿ, ಪೊಲೀಸರಿಗೆ ಧನ್ಯವಾದಗಳು. ನನ್ನ ಕುಟುಂಬದವರು ಪಿಎಂ ಕೇರ್ಸ್ ನಿಧಿ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಸಣ್ಣಮಟ್ಟದ ನೆರವು ನೀಡಿದ್ದೇವೆ’ ಎಂದು ಪೂಜಾರ ಹೇಳಿದ್ದಾರೆ. ದೇಣಿಗೆಯ ಮೊತ್ತವನ್ನು ಅವರು
ಬಹಿರಂಗಪಡಿಸಿಲ್ಲ.
ಬ್ಯಾಡ್ಮಿಂಟನ್ ಆಟಗಾರ ಪರುಪಳ್ಳಿ ಕಶ್ಯಪ್ ಅವರು ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 3 ಲಕ್ಷ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.