ದುಬೈ: ಮುಂಬರುವ ಟ್ವೆಂಟಿ-20 ವಿಶ್ವಕಪ್ಗಾಗಿ ಟೀಮ್ ಇಂಡಿಯಾ ಬಯೋಬಯಲ್ ಸೇರಿಕೊಳ್ಳುವಂತೆ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಹಾಗೂ ವೇಗದ ಬೌಲರ್ ಆವೇಶ್ ಖಾನ್ ಅವರಿಗೆ ಬಿಸಿಸಿಐ ಸೂಚನೆ ನೀಡಿದೆ ಎಂಬುದು ವರದಿಯಾಗಿದೆ.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭಾರತ ತಂಡದೊಂದಿಗೆ ಇರಲಿದ್ದಾರೆ. ಆದರೆ ವಿಶ್ವಕಪ್ನಲ್ಲಿ ಅವರನ್ನು ಓರ್ವ ಪರಿಪೂರ್ಣ ಬ್ಯಾಟರ್ ಆಗಿ ಪರಿಗಣಿಸುವ ಸಾಧ್ಯತೆಯಿದೆ. ಏಕೆಂದರೆ ಅವರ ಬೆನ್ನು ಇನ್ನೂ ಮಧ್ಯದ ವೇಗದ ಬೌಲಿಂಗ್ ಒತ್ತಡವನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ ಎಂಬುದು ತಿಳಿದು ಬಂದಿದೆ.
ಹಾಗಾಗಿ ಅಗತ್ಯ ಬಂದರೆ ಹಾರ್ದಿಕ್ ಸ್ಥಾನವನ್ನು ತುಂಬುವ ನಿಟ್ಟಿನಲ್ಲಿ ವೆಂಕಟೇಶ್ ಅಯ್ಯರ್ ಅವರಲ್ಲಿ ಬಯೋಬಬಲ್ಗೆ ಸೇರಿಕೊಳ್ಳುವಂತೆ ಸೂಚಿಸಲಾಗಿದೆ. ಐಪಿಎಲ್ನಲ್ಲಿ ಕೆಕೆಆರ್ ತಂಡವನ್ನು ಪ್ರತಿನಿಧಿಸುತ್ತಿರುವ ಅಯ್ಯರ್, ಎಂಟು ಪಂದ್ಯಗಳಲ್ಲಿ 37.85ರ ಸರಾಸರಿಯಲ್ಲಿ 265 ರನ್ ಹಾಗೂ ಮೂರು ವಿಕೆಟ್ ಗಳಿಸಿದ್ದಾರೆ.
ಅತ್ತ ಉಮ್ರಾನ್ ಮಲಿಕ್ ಬಳಿಕ ಆವೇಶ್ ಖಾನ್ ಅವರಲ್ಲೂ ನೆಟ್ ಬೌಲರ್ ಆಗಿ ಉಳಿದುಕೊಳ್ಳುವಂತೆ ಸೂಚಿಸಲಾಗಿದೆ. 24 ವರ್ಷದ ಆವೇಶ್ ಖಾನ್ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಐಪಿಎಲ್ ಬಳಿಕ ಇವರಿಬ್ಬರು ಟೀಮ್ ಇಂಡಿಯಾ ಬಯೋಬಬಲ್ ಸೇರಿಕೊಳ್ಳಲಿದ್ದಾರೆ. ಬುಧವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿವೆ.
ಐಪಿಎಲ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಆವೇಶ್ ಖಾನ್ ಇದುವರೆಗೆ 23 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಆರ್ಸಿಬಿಯ ಹರ್ಷಲ್ ಪಟೇಲ್ (32 ವಿಕೆಟ್) ಬಳಿಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.