ADVERTISEMENT

T20 WC: ಭಾರತದ ವಿರುದ್ಧ ಪಾಕ್‌ ಗೆದ್ದರೆ ಉದ್ಯಮಿಯಿಂದ ಖಾಲಿ ಚೆಕ್‌: ರಮೀಜ್‌ ರಾಜಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಅಕ್ಟೋಬರ್ 2021, 10:05 IST
Last Updated 8 ಅಕ್ಟೋಬರ್ 2021, 10:05 IST
ರಮೀಜ್ ರಾಜಾ
ರಮೀಜ್ ರಾಜಾ   

ಕರಾಚಿ: ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸಿದರೆ ಪಿಸಿಬಿಗೆ 'ಖಾಲಿ ಚೆಕ್' ಸಿಗಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ರಮೀಜ್ ರಾಜಾ ಬಹಿರಂಗಪಡಿಸಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸಿದರೆ ಪಿಸಿಬಿಗೆ ಖಾಲಿ ಚೆಕ್ ಸಿದ್ಧವಾಗಿದೆ ಎಂದು ಪ್ರಬಲ ಹೂಡಿಕೆದಾರರೊಬ್ಬರು ಹೇಳಿರುವುದಾಗಿ ರಮೀಜ್ ರಾಜಾ ತಿಳಿಸಿದ್ದಾರೆ.

ಅದೇ ಹೊತ್ತಿಗೆ ಪಾಕಿಸ್ತಾನ ಕ್ರಿಕೆಟ್ ಅನ್ನು ಮತ್ತಷ್ಟು ಬಲಿಷ್ಠಗೊಳಿಸುವುದಾಗಿ ರಾಜಾ ಹೇಳಿದರು.

'ಐಸಿಸಿಯ ಶೇಕಡಾ 50ರಷ್ಟು ಸಹಾಯಧನದಿಂದ ಪಿಸಿಬಿ ನಡೆಯುತ್ತಿದೆ. ಐಸಿಸಿಗೆ ಶೇಕಡಾ 90ರಷ್ಟು ನಿಧಿ ಭಾರತದಿಂದ ಬರುತ್ತದೆ. ಹಾಗಾಗಿ ಐಸಿಸಿಗೆ ಧನಸಹಾಯವನ್ನು ಭಾರತ ನಿಲ್ಲಿಸಿದರೆ ಪಿಸಿಬಿ ಪತನವಾಗಲಿದೆ ಎಂಬ ಬಗ್ಗೆ ಆತಂಕವಿದೆ. ಯಾಕೆಂದರೆ ಐಸಿಸಿಗೆ ಪಿಸಿಬಿ ಹಣವನ್ನು ನೀಡುತ್ತಿಲ್ಲ. ಹಾಗಾಗಿ ಪಾಕಿಸ್ತಾನ ಕ್ರಿಕೆಟ್ ಅನ್ನು ಬಲಿಷ್ಠಗೊಳಿಸಲು ಪಣತೊಟ್ಟಿದ್ದೇನೆ' ಎಂದು ಹೇಳಿದರು.

ಕಳೆದ ತಿಂಗಳು ಭದ್ರತಾ ಕಾರಣಗಳನ್ನು ಒಡ್ಡಿ ನ್ಯೂಜಿಲೆಂಡ್ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿತ್ತು. ಪಿಸಿಬಿ ಆರ್ಥಿಕವಾಗಿ ಬಲಾಢ್ಯವಾಗಿದ್ದರೆ ತಂಡಗಳು ಹಿಂಜರಿಯುವುದಿಲ್ಲ ಎಂದು ರಮೀಜ್ ರಾಜಾ ಹೇಳಿದರು.

ಬಿಸಿಸಿಐ ಆತಿಥ್ಯ ವಹಿಸುತ್ತಿರುವ ಈ ಬಾರಿಯ ಟ್ವೆಂಟಿ-20 ವಿಶ್ವಕಪ್ ಯುಎಇ ಹಾಗೂ ಒಮಾನ್‌ನಲ್ಲಿ ನಡೆಯಲಿದೆ. ಅಕ್ಟೋಬರ್ 24ರಂದು ಭಾರತ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಸವಾಲನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.