ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸೋಲುವಂತೆ ಟೀಮ್ ಇಂಡಿಯಾ ಮಾರ್ಗದರ್ಶಕ ಮಹೇಂದ್ರ ಸಿಂಗ್ ಧೋನಿ ಹಾಗೂ ಕೆ.ಎಲ್. ರಾಹುಲ್ ಅವರಲ್ಲಿ ಪಾಕಿಸ್ತಾನದ ಅಭಿಮಾನಿಗಳು ವಿನಂತಿ ಮಾಡಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವಣ ರೋಚಕ ಕದನವು ಇಂದು ಸಂಜೆ (ಭಾನುವಾರ) ದುಬೈಯಲ್ಲಿ 7.30ಕ್ಕೆ ಆರಂಭವಾಗಲಿದೆ.
ಭಾರತೀಯ ಆಟಗಾರರು ಶನಿವಾರ ಅಭ್ಯಾಸದ ಬಳಿಕ ಹೋಟೆಲ್ಗೆ ಹಿಂತಿರುಗುತ್ತಿದ್ದ ವೇಳೆ ಪಾಕಿಸ್ತಾನದ ಅಭಿಮಾನಿಗಳು ವಿನಂತಿಸಿದ್ದಾರೆ.
'ರಾಹುಲ್, ದಯವಿಟ್ಟು ನಾಳಿನ ಪಂದ್ಯದಲ್ಲಿ ಉತ್ತಮವಾಗಿ ಆಡಬೇಡಿ' ಎಂದು ವಿನಂತಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರಿಗೂ ಇದಕ್ಕೆ ಸಮಾನವಾದ ಪ್ರಶ್ನೆ ಎದುರಾಗಿತ್ತು. 'ದಯವಿಟ್ಟು ಈ ಪಂದ್ಯವನ್ನು ಬಿಟ್ಟುಬಿಡಿ' ಎಂದು ವಿನಂತಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಹಿ, 'ಇದುವೇ ನಮ್ಮ ಕೆಲಸ' ಎಂದು ನಗುಮುಖದಿಂದಲೇ ಉತ್ತರಿಸುತ್ತಾರೆ. ಮಹಿ ಜೊತೆಗೆ ಜಸ್ಪ್ರೀತ್ ಬೂಮ್ರಾ ಸಹ ಕಂಡುಬಂದಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದು ಬಹಳಷ್ಟು ಕುತೂಹಲ ಕೆರಳಿಸಿದೆ. ವಿಶ್ವಕಪ್ನಲ್ಲಿ ಇದುವರೆಗೆ ಆಡಿರುವ ಎಲ್ಲ 12 ಪಂದ್ಯಗಳಲ್ಲಿ ಭಾರತ ಗೆಲುವಿನ ದಾಖಲೆಯನ್ನು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.