
ಹರಾರೆ: ಭಾರತದ ಕ್ರಿಕೆಟ್ ಕ್ಷೇತ್ರದ ಭವಿಷ್ಯದ ತಾರೆಗಳಾಗುವ ಕನಸು ಕಾಣುತ್ತಿರುವ ಚಿಗುರುಮೀಸೆಯ ಹುಡುಗರು ಈಗ ದಾಖಲೆಯ ಹೊಸ್ತಿಲಲ್ಲಿ ನಿಂತಿದ್ದಾರೆ.
ಶುಕ್ರವಾರ ನಡೆಯಲಿರುವ ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಆಡಲಿರುವ ಭಾರತ ಯುವಪಡೆಯು ಆರನೇ ಬಾರಿ ಕಿರೀಟ ಧರಿಸುವತ್ತ ಚಿತ್ತ ನೆಟ್ಟಿದೆ. ಆಯುಷ್ ಮ್ಹಾತ್ರೆ ನಾಯಕತ್ವದ ಭಾರತ ತಂಡವು ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಆಡಲಿದೆ.
ಸೆಮಿಫೈನಲ್ನಲ್ಲಿ ಅಫ್ಗಾನಿಸ್ತಾನದ ಎದುರು 311 ರನ್ಗಳ ಬೃಹತ್ ಗುರಿಯನ್ನು ನಿರಾಯಾಸವಾಗಿ ಸಾಧಿಸಿದ ಭಾರತ ತಂಡವು ಭರ್ತಿ ಆತ್ಮವಿಶ್ವಾಸದಲ್ಲಿದೆ. ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಅಷ್ಟೇನೂ ರನ್ ಗಳಿಸದ ಆ್ಯರನ್ ಜಾರ್ಜ್ ಸೆಮಿ ಪಂದ್ಯದಲ್ಲಿ ಶತಕ ಹೊಡೆದರು. ನಾಯಕ ಆಯುಷ್ ಮ್ಹಾತ್ರೆ ಅರ್ಧಶತಕ ಗಳಿಸಿ ಲಯಕ್ಕೆ ಮರಳಿದರು. ವೈಭವ್ ಸೂರ್ಯವಂಶಿ ಯಥಾಪ್ರಕಾರ ತಮ್ಮ ‘ಗದಾಪ್ರಹಾರ’ದ ಮೂಲಕ ರನ್ ಸೂರೆ ಮಾಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ವಿಹಾನ್ ಮಲ್ಹೋತ್ರಾ, ಅಭಿಗ್ಯಾನ್ ಕುಂದು ಹಾಗೂ ವೇದಾಂತ್ ತ್ರಿವೇದಿ ಅವರು ಉತ್ತಮ ಲಯದಲ್ಲಿದ್ದಾರೆ. ಆದ್ದರಿಂದ ಬ್ಯಾಟಿಂಗ್ ವಿಭಾಗವು ಬಲಿಷ್ಠವಾಗಿದೆ.
ಬೌಲಿಂಗ್ನಲ್ಲಿ ಪ್ರತಿಭಾನ್ವಿತರಾದ ಅಂಬರೀಷ್, ಹೆನಿಲ್ ಪಟೇಲ್, ಖಿಲಾನ್ ಪಟೇಲ್ ಅವರು ತಮ್ಮ ನೈಜ ಸಾಮರ್ಥ್ಯವನ್ನು ಮೆರೆಯಬೇಕು. ರನ್ಗಳಿಗೆ ಕಡಿವಾಣ ಹಾಕಬೇಕು.
ವಿಕೆಟ್ಕೀಪರ್ ಥಾಮಸ್ ರೀವ್ ನಾಯಕತ್ವದ ಇಂಗ್ಲೆಂಡ್ ತಂಡವು ನಾಲ್ಕರ ಘಟ್ಟದಲ್ಲಿ ಆಸ್ಟ್ರೇಲಿಯಾ ಎದುರು ಗೆದ್ದಿತ್ತು. ಆ ಪಂದ್ಯದಲ್ಲಿ ಥಾಮಸ್ ಶತಕ ಗಳಿಸಿ ಗೆಲುವಿನ ರೂವಾರಿಯಾಗಿದ್ದರು. ಸೆಲೆಬ್ ಫಾಲ್ಕನರ್, ಬೆನ್ ಡಾಕಿನ್ಸ್ ಹಾಗೂ ಜೋಸೆಫ್ ಮೋರಿಸ್ ಅವರೂ ಉತ್ತಮ ಲಯದಲ್ಲಿದ್ದಾರೆ. ಬೆನ್ ಮೇಯ್ಸ್, ಸಬಾಸ್ಟಿಯನ್ ಮಾರ್ಗನ್, ಜೇಮ್ಸ್ ಮಿಂಟೊ, ಮ್ಯಾನಿ ಲಮ್ಸ್ಡೆನ್ ಅವರು ಇದುವರೆಗೆ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಇದೀಗ ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ನಿಯಂತ್ರಿಸುವ ಸವಾಲು ಅವರ ಮುಂದಿದೆ.
2022ರಲ್ಲಿ ವೆಸ್ಟ್ ಇಂಡೀಸ್ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಜಯಿಸಿತ್ತು. ಈ ಬಾರಿಯೂ ಆಯುಷ್ ಬಳಗವು ಜಯಭೇರಿ ಬಾರಿಸುವ ವಿಶ್ವಾಸದಲ್ಲಿದೆ.
ಪಂದ್ಯ ಆರಂಭ: ಮಧ್ಯಾಹ್ನ 1
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.