ಹುಬ್ಬಳ್ಳಿ: ಅಷ್ಟೇನು ಸವಾಲು ಅಲ್ಲದ ಗುರಿಯನ್ನು ಸುಲಭವಾಗಿ ಮುಟ್ಟಿದ ಉಡುಪಿ ಹಾಸ್ಟೆಟಲಿಟಿ ಸರ್ವಿಸ್ ತಂಡ, ಹುಬ್ಬಳ್ಳಿಯ ಅಸ್ತ್ರ ಇವೆಂಟ್ಸ್ ಆಯೋಜಿಸಿದ್ದಅಸ್ತ್ರ ಪ್ರೀಮಿಯರ್ ಲೀಗ್ (ಎಪಿಎಲ್) ಕ್ರಿಕೆಟ್ ಟೂರ್ನಿಯ ಎರಡನೇ ಆವೃತ್ತಿಯಲ್ಲಿ ಚಾಂಪಿಯನ್ ಆಯಿತು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಹೊನಲು ಬೆಳಕಿನಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಉಡುಪಿಯ ತಂಡ ಹುಬ್ಬಳ್ಳಿಯ ಸುಗ್ಗಿ ಸೂಪರ್ ಸ್ಟಾರ್ ತಂಡವನ್ನು ಐದು ವಿಕೆಟ್ಗಳಿಂದ ಮಣಿಸಿತು.
ಮೊದಲು ಬ್ಯಾಟ್ ಮಾಡಿದ ಸುಗ್ಗಿ ಸೂಪರ್ ಸ್ಟಾರ್ಸ್ ನಿಗದಿತ ಎಂಟು ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 60 ರನ್ ಕಲೆಹಾಕಿತು. ಈ ಗುರಿಯನ್ನು ಉಡುಪಿಯ ತಂಡ 7.3 ಓವರ್ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ತಲುಪಿ ₹2.5 ಲಕ್ಷ ಬಹುಮಾನ ತನ್ನದಾಗಿಸಿಕೊಂಡಿತು. ರನ್ನರ್ಸ್ ಅಪ್ ತಂಡಕ್ಕೆ ₹ 1.5 ಲಕ್ಷ ಲಭಿಸಿತು.
ಇದಕ್ಕೂ ಮೊದಲು ನಡೆದ ಕ್ವಾಲಿಫೈಯರ್ ಪಂದ್ಯಗಳಲ್ಲಿ ಉಡುಪಿ ತಂಡ, ಸುಗ್ಗಿ ಸೂಪರ್ ಸ್ಟಾರ್ಸ್ ಎದುರು ಗೆಲುವು ಪಡೆದರೆ, ಇನ್ನೊಂದು ಪಂದ್ಯದಲ್ಲಿ ಸೂಪರ್ ಸ್ಟಾರ್ಸ್, ಗೂಗ್ಲಿ ಪೊಳಲಿ ಟೈಗರ್ಸ್ ಎದುರು ವಿಜಯ ಸಾಧಿಸಿತು. ಎರಡು ದಿನ ನಡೆದ ಟೂರ್ನಿಯಲ್ಲಿ ಏಳು ತಂಡಗಳು ಪಾಲ್ಗೊಂಡಿದ್ದವು.
ಉಡುಪಿ ತಂಡದ ರವಿ ಪಂದ್ಯ ಶ್ರೇಷ್ಠ, ರಕ್ಷಿತ್ ಶೆಟ್ಟಿ (ಅತ್ಯುತ್ತಮ ಬೌಲರ್), ಜೀವನ ಶೆಟ್ಟಿ (ಅತ್ಯುತ್ತಮ ಬ್ಯಾಟ್ಸ್ಮನ್) ಮತ್ತು ಸುಗ್ಗಿ ತಂಡದ ಪ್ರದೀಪ ಶೆಟ್ಟಿ ಟೂರ್ನಿಯ ಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರರಾದರು.
ಸುಗ್ಗಿ ಸುಧಾಕರ ಶೆಟ್ಟಿ, ಸಚಿನ್ ಶಹಾ, ಬ್ರ್ಯಾನ್ ಡಿಸೋಜಾ, ಡಾ. ಬೇಲೂರು ರಾಘವೇಂದ್ರ ಶೆಟ್ಟಿ, ಸುಧೀರ ಶೆಟ್ಟಿ, ದಿನೇಶ ಶೆಟ್ಟಿ, ವೀರೇಂದ್ರ ಶೆಟ್ಟಿ, ಪುರಂದರ ರೈ, ಸಂತೋಷ ಶೆಟ್ಟಿ ಮತ್ತು ಶಿವಪ್ರಸಾದ ಶೆಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.