ನವದೆಹಲಿ: ಕೊರೊನಾ ವೈರಸ್ನಿಂದ ರಕ್ಷಿಸಿಕೊಳ್ಳಲು ಸ್ವಯಂ ಪ್ರತ್ಯೇಕವಾಸವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ನಡೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹೇಳಿದ್ದಾರೆ.
ಟ್ವಿಟರ್ನಲ್ಲಿ ಈಕುರಿತು ವಿಡಿಯೊ ಹಾಕಿರುವ ತಾರಾ ದಂಪತಿಯು ಕೊರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದೆ.
‘ಸದ್ಯ ನಾವೆಲ್ಲರೂ ಅತ್ಯಂತ ಕಠಿಣ ಸಮಯವನ್ನು ಎದುರಿಸುತ್ತಿದ್ದೇವೆ. ಕೊರೊನಾ ವೈರಸ್ನ ಹರಡುವಿಕೆಯನ್ನು ತಡೆಯಲು ಮುಂಜಾಗ್ರತೆಯೊಂದೇ ಪರಿಹಾರವಾಗಿದೆ. ಅದಕ್ಕಾಗಿ ನಾವೆಲ್ಲರೂ ಸಾಧ್ಯವಾದಷ್ಟು ಮನೆಯಲ್ಲಿಯೇ ಇರಬೇಕು. ಪ್ರತ್ಯೇಕವಾಗಿ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಂಡು ಇದ್ದರೆ, ನಾವು ಮತ್ತು ಸಮಾಜಕ್ಕೆ ಒಳಿತು’ ಎಂದು ವಿರಾಟ್ ಹೇಳಿದ್ದಾರೆ.
‘ವೈರಸ್ ಇನ್ನಷ್ಟು ಹರಡುವುದನ್ನು ತಡೆಗಟ್ಟಲು ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೇಕು’ ಎಂದು ಅನುಷ್ಕಾ ಹೇಳಿದ್ದಾರೆ. ಇದೇ ಭಾನುವಾರ ಜನತಾ ಕರ್ಫ್ಯೂ ಆಚರಿಸುವಂತೆ ಪ್ರಧಾನಿ ಮೋದಿಯವರು ನೀಡಿರುವ ಕರೆಯನ್ನೂ ವಿರಾಟ್ ಮತ್ತು ಅನುಷ್ಕಾ ಬೆಂಬಲಿಸಿದ್ದಾರೆ.
ಇದಕ್ಕೆ ಹಲವು ಕ್ರೀಡಾ ದಿಗ್ಗಜರೂ ದನಿಗೂಡಿಸಿದ್ದಾರೆ. ಭಾರತ ತಂಡದ ಕೋಚ್ ರವಿಶಾಸ್ತ್ರಿ, ಆಟಗಾರ ಶಿಖರ್ ಧವನ್, ಆರ್. ಅಶ್ವಿನ್ ಮತ್ತು ಹರಭಜನ್ ಸಿಂಗ್ ಅವರೂ ಜನತಾ ಕರ್ಫ್ಯೂ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.