ನವದೆಹಲಿ (ಪಿಟಿಐ): ಭಾರತ ಮತ್ತು ಪಾಕಿಸ್ತಾನ ನಡುವಣ ದುಬೈನಲ್ಲಿ ಭಾನುವಾರ ನಿಗದಿಯಾಗಿರುವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ರದ್ದುಗೊಳಿಸಬೇಕೆಂದು ಕೋರಿದ್ದ ಮನವಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿತು.
ಈ ಕುರಿತಾದ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕೆಂದು ವಕೀಲರೊಬ್ಬರು ನ್ಯಾಯಮೂರ್ತಿಗಳಾದ ಜೆ.ಕೆ.ಮಾಹೇಶ್ವರಿ ಮತ್ತು ವಿಜಯ್ ಬಿಷ್ಣೋಯಿ ಅವರಿದ್ದ ಪೀಠಕ್ಕೆ ಮನವಿ ಮಾಡಿದರು.
‘ಅಷ್ಟೊಂದು ತುರ್ತು ಏನಿದೆ? ಅದೊಂದು ಪಂದ್ಯ. ನಡೆಯಲಿ. ಪಂದ್ಯ ಭಾನುವಾರ ನಿಗದಿಯಾಗಿದೆ. ಈಗೇನು ಮಾಡಲು ಸಾಧ್ಯ’ ಎಂದು ಪೀಠ ಅಭಿಪ್ರಾಯಪಟ್ಟಿತು.
ಪಂದ್ಯ ಭಾನುವಾರವೇ ಇರುವುದರಿಂದ ಈಗ ವಿಚಾರಣೆಗೆ ತೆಗೆದುಕೊಳ್ಳುತ್ತದೆ ಮನವಿ ನಿಷ್ಫಲವಾಗುತ್ತದೆ ಎಂದು ವಕೀಲರು ಮನವಿ ಮಾಡಿದಾಗ, ‘ಇದೇ ಭಾನುವಾರವೇ? ನಾವು ಈಗ ಏನು ಮಾಡಲು ಸಾಧ್ಯ. ಪಂದ್ಯ ನಡೆಯಲಿ’ ಎಂದರು.
ಊರ್ವಶಿ ಜೈನ್ ನೇತೃತ್ವದಲ್ಲಿ ನಾಲ್ವರು ಕಾನೂನು ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದರು. ಪಹಲ್ಗಾಮ್ನಲ್ಲಿ ಭಯೋತ್ಪಾದನೆ ದಾಳಿ ಮತ್ತು ಸಿಂಧೂರ ಕಾರ್ಯಾಚರಣೆಯ ನಂತರ ನಂತರ ಪಾಕಿಸ್ತಾನದ ಜೊತೆ ಪಂದ್ಯ ನಡೆಸುವುದು ರಾಷ್ಟ್ರದ ಘನತೆ ಕುಂದು ತರುತ್ತದೆ ಮತ್ತು ಸಾರ್ವಜನಿಕರ ಭಾವನೆಗೆ ಧಕ್ಕೆಯುಂಟು ಮಾಡುವ ಸಂದೇಶ ರವಾನಿಸುತ್ತದೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು.
ಎರಡು ರಾಷ್ಟ್ರಗಳ ನಡುವಣ ಕ್ರಿಕೆಟ್ ಪಂದ್ಯವು ರಾಷ್ಟ್ರದ ಹಿತಾಸಕ್ತಿಗೆ ಮಾರಕವಾಗಿದೆ ಮತ್ತು ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯ ಕುಂದಿಸುತ್ತದೆ ಎಂದೂ ಅರ್ಜಿಯಲ್ಲಿ ತಿಳಿಸಲಾಗಿತ್ತು.
ಸ್ವೀಕರಾರ್ಹವಲ್ಲ: ರಾವುತ್
ಮುಂಬೈ ವರದಿ: ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡವು, ಪಾಕಿಸ್ತಾನ ವಿರುದ್ಧ ಆಡುವುದನ್ನು ಪ್ರತಿಭಟಿಸಿ ತಮ್ಮ ಪಕ್ಷವು ಭಾನುವಾರ ‘ಸಿಂಧೂರ್ ರಕ್ಷಾ’ ಅಭಿಯಾನ ನಡೆಸಲಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ತಿಳಿಸಿದ್ದಾರೆ.
ಪಾಕಿಸ್ತಾನ ವಿರುದ್ಧ ಆಡುವುದು ವಿಶ್ವಾಸಘಾತುಕತನ ಆಗಯುತ್ತದೆ ಎಂದು ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ. ಮಹಾರಾಷ್ಟ್ರದ ಸಾವಿರಾರು ಮಹಿಳೆಯರು ಇದರಲ್ಲಿ ಭಾಗವಹಿಸಲಿದ್ದು, ಮನೆಯಿಂದ ಸಿಂಧೂರ ತರಲಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಲಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.