ADVERTISEMENT

ಕಮಾನ್‌, ನಿನ್ನ ಹಿಂದೆ ಇಡೀ ಭಾರತವಿದೆ: ಸ್ಕಾಟ್ಲೆಂಡ್‌ ವಿಕೆಟ್‌ ಕೀಪರ್‌!

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 12:09 IST
Last Updated 4 ನವೆಂಬರ್ 2021, 12:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಬುಧಾಬಿ:ದುಬೈನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲ್ಯಾಂಡ್‌ ಮತ್ತು ಸ್ಕಾಟ್ಲೆಂಡ್‌ ನಡುವಣ ಪಂದ್ಯದ ವೇಳೆ ಆಟಗಾರರ ನಡುವಣ ಸಂಭಾಷಣೆ ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡಿದೆ.

ಸ್ಕಾಟ್ಲೆಂಡ್‌ ವಿಕೆಟ್‌ ಕೀಪರ್‌ ಮ್ಯಾಥ್ಯೂ ಕ್ರಾಸ್‌ ಸಹ ಆಟಗಾರನನ್ನು ಹುರಿದುಂಬಿಸುವ ವೇಳೆ 'ಕಮಾನ್‌, ಇಡೀ ಭಾರತ ನಿನ್ನ ಹಿಂದಿದೆ' ಎಂದು ಹೇಳುತ್ತಿರುವುದು ಸ್ಟಂಪ್‌ ಮೈಕ್‌ನಲ್ಲಿ ದಾಖಲಾಗಿದೆ.

ಪಂದ್ಯದ 7ನೇ ಓವರ್‌ ಎಸೆಯುತ್ತಿದ್ದ ಕ್ರಿಸ್‌ ಗ್ರೇವ್ಸ್‌ಗೆ ವಿಕೆಟ್‌ ಕೀಪರ್‌ ಮ್ಯಾಥ್ಯೂ ಕ್ರಾಸ್‌ ಹುರಿದುಂಬಿಸಿದ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯದ ಸರಕಾಗಿ ಮಾರ್ಪಟ್ಟಿತ್ತು.

ADVERTISEMENT

ಪಂದ್ಯದಲ್ಲಿ ಸ್ಕಾಟ್ಲೆಂಡ್‌ ಗೆದ್ದರೆ ಮೊದಲ ಎರಡು ಪಂದ್ಯಗಳನ್ನು ಸೋತಿದ್ದ ಭಾರತ ಸೆಮಿ-ಫೈನಲ್‌ಗೆ ಹೋಗುವ ಅವಕಾಶ ಗಟ್ಟಿಯಾಗುತ್ತಿತ್ತು. ಹಾಗಾಗಿ ಇಡೀ ಭಾರತ ಸ್ಕಾಟ್ಲೆಂಡ್‌ಅನ್ನು ಬೆಂಬಲಿಸುತ್ತಿದೆ ಎಂಬ ಅರ್ಥದಲ್ಲಿ ಸಹ ಆಟಗಾರನಿಗೆ ಮ್ಯಾಥ್ಯೂ ಕ್ರಾಸ್‌ ಹುರಿದುಂಬಿಸಿದ್ದರು. ಆದರೆ 16 ರನ್‌ಗಳಿಂದ ನ್ಯೂಜಿಲೆಂಡ್‌ ವಿರುದ್ಧ ಸ್ಕಾಟ್ಲೆಂಡ್‌ ಪರಾಭವ ಗೊಂಡಿತು.

ಇದೇ ವೇಳೆ ಬುಧವಾರ ಶೇಖ್‌ ಝಯೇದ್‌ ಕ್ರೀಡಾಂಗಣದಲ್ಲಿ ನಡೆದ ಸೂಪರ್‌ 12ರ ಎರಡನೇ ಗುಂಪಿನ ಪಂದ್ಯದಲ್ಲಿ ಅಫ್ಗಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ 66 ರನ್‌ಗಳಿಂದ ಜಯ ಗಳಿಸಿತು.

ನವೆಂಬರ್‌ 5ರಂದು ಸ್ಕಾಟ್ಲೆಂಡ್‌ ವಿರುದ್ಧ ಭಾರತ ಸೆಣಸುತ್ತಿದೆ. ಸೆಮಿ-ಫೈನಲ್‌ ಹಾದಿ ಸುಗಮಗೊಳಿಸಲು ಸ್ಕಾಟ್ಲೆಂಡ್‌ ವಿರುದ್ಧ ದೊಡ್ಡ ಅಂತರದಿಂದ ಗೆಲುವ ಸಾಧಿಸುವ ಒತ್ತಡ ಭಾರತದ ಮೇಲಿದೆ. ಸ್ಕಾಟ್ಲೆಂಡ್‌ ಈಗಾಗಲೇ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದ್ದು, ಒಂದು ಪಂದ್ಯವನ್ನಾದರೂ ಗೆಲ್ಲುವ ತವಕದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.