ಟಾಂಟನ್, ಇಂಗ್ಲೆಂಡ್: ಟೂರ್ನಿಯ ಪಾಯಿಂಟ್ ಪಟ್ಟಿಯಲ್ಲಿ ಸಮಬಲಶಾಲಿಗಳಂತೆ ಕಾಣುವ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ತಂಡಗಳು ಸೋಮವಾರ ಮುಖಾಮುಖಿಯಾಗಲಿವೆ.
ಈ ಟೂರ್ನಿಯಲ್ಲಿ ಉಭಯ ತಂಡಗಳೂ ತಲಾ ನಾಲ್ಕು ಪಂದ್ಯಗಳನ್ನು ಆಡಿವೆ. ಒಂದೊಂದರಲ್ಲಿ ಗೆದ್ದು, ಎರಡರಲ್ಲಿ ಸೋತಿವೆ. ಇನ್ನೊಂದು ಪಂದ್ಯ ಮಳೆಯಿಂದಾಗಿ ರದ್ದಾಗಿದ್ದವು.
ಸ್ಫೋಟಕ ಬ್ಯಾಟ್ಸ್ಮನ್ಗಳ ದಂಡೇ ಇರುವ ವೆಸ್ಟ್ ಇಂಡೀಸ್ ತಂಡವು ಇನ್ನೂ ಟ್ವೆಂಟಿ–20 ಮನೋಭಾವದಿಂದ ಹೊರಬಂದಂತೆ ಕಾಣುತ್ತಿಲ್ಲ. ಏಕದಿನ ಮಾದರಿಯ ಕ್ರಿಕೆಟ್ ಆಟದ ಮಾದರಿಯನ್ನು ರೂಢಿಸಿಕೊಂಡರೆ ಮುಂದಿನ ಎಲ್ಲ ಪಂದ್ಯಗಳಲ್ಲಿಯೂ ಮೇಲುಗೈ ಸಾಧಿಸುವ ಸಾಮರ್ಥ್ಯ ಇದೆ. ಆದರೆ, ತಂಡವು ಸೋತ ಎರಡೂ ಪಂದ್ಯಗಳನ್ನು ನೋಡಿದರೆ, ಸ್ಥಿರ ಆಟದ ಕೊರತೆ ಎದ್ದು ಕಾಣುತ್ತದೆ.
ಕ್ರಿಸ್ ಗೇಲ್, ಶಾಯ್ ಹೋಪ್, ಹೆಟ್ಮೆಯರ್, ಆ್ಯಂಡ್ರೆ ರಸೆಲ್ ಅವರು ತಮ್ಮ ಪೂರ್ಣ ಭುಜಬಲವನ್ನು ಇನ್ನೂ ಪ್ರಯೋಗಿಸಿಲ್ಲ. ಆದರೆ, ನಿಕೊಲಸ್ ಪೂರನ್ ಒಬ್ಬರೇ ನಿರಂತರವಾಗಿ ಉತ್ತಮ ಆಟವಾಡುತ್ತಿದ್ದಾರೆ. ಐಪಿಎಲ್ನಲ್ಲಿ ಮಿಂಚಿದ್ದ ರಸೆಲ್ ಇಲ್ಲಿ ದೊಡ್ಡ ಆಟ ಆಡುವಲ್ಲಿ ವಿಫಲರಾಗಿದ್ದಾರೆ. ಕೆಳಮಧ್ಯಮಕ್ರಮಾಂಕದಲ್ಲಿ ರಸೆಲ್ ಏನಾದರೂ ಬೀಸಾಟವಾಡಿದರೆ ಎದುರಾಳಿಗಳ ಮೇಲೆ ಒತ್ತಡ ಹೆಚ್ಚುವುದು ಖಚಿತ.
ಬಾಂಗ್ಲಾ ತಂಡವು ಇದುವರೆಗೆ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಉತ್ತಮವಾಗಿಯೇ ಆಡಿದೆ. ಸೋಲಿನಲ್ಲಿಯೂ ಹೋರಾಟ ಗಮನ ಸೆಳೆದಿತ್ತು. ಮೂರನೇ ಕ್ರಮಾಂಕದಲ್ಲಿ ಆಡಿರುವ ಆಲ್ರೌಂಡರ್ ಶಕೀಬ್ ಅಲ್ ಹಸನ್ ಈಗಾಗಲೇ ಒಂದು ಶತಕ ಹೊಡೆದು ತಮ್ಮ ಹೆಜ್ಜೆಗುರುತು ಮೂಡಿಸಿದ್ದಾರೆ. ಸೌಮ್ಯ ಸರ್ಕಾರ್ ಕೂಡ ಭರವಸೆ ಮೂಡಿಸಿದ್ದಾರೆ.
ಬೌಲಿಂಗ್ನಲ್ಲಿ ಮಷ್ರಫೆ, ಮುಸ್ತಫಿಜುರ್ ರೆಹಮಾನ್ ಮತ್ತು ಶಕೀಬ್ ಅವರು ಪ್ರಮುಖರಾಗಿದ್ದಾರೆ. ಎದುರಾಳಿ ಬ್ಯಾಟ್ಸ್ಮನ್ಗಳಿಗೆ ಕಡಿವಾಣ ಹಾಕುವ ಸಾಮರ್ಥ್ಯ ಅವರಿಗೆ ಇದೆ.
ಈ ಹಿಂದೆಯೂ ವಿಂಡೀಸ್ ತಂಡವನ್ನು ಸೋಲಿಸಿರುವ ದಾಖಲೆಯನ್ನು ಬಾಂಗ್ಲಾ ಹೊಂದಿದೆ. ಆದ್ದರಿಂದ ಇಲ್ಲಿಯೂ ಪಾರಮ್ಯ ಮೆರೆಯುವ ವಿಶ್ವಾಸದಲ್ಲಿದೆ. ಸಂಘಟಿತ ಹೋರಾಟ ಮಾಡುವ ತಂಡವೇ ಇಲ್ಲಿಯ ಪಿಚ್ನಲ್ಲಿ ಗೆಲುವು ಸಾಧಿಸುವುದು ಖಚಿತ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.