ADVERTISEMENT

ಮ್ಯಾಥ್ಯೂಸ್‌ ಶತಕ, ತಿರಿಮನ್ನೆ ಉತ್ತಮ ಆಟ; ಭಾರತಕ್ಕೆ 265 ರನ್‌ ಗುರಿ

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 14:02 IST
Last Updated 6 ಜುಲೈ 2019, 14:02 IST
ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್‌ ಆಟದ ವೈಖರಿ
ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್‌ ಆಟದ ವೈಖರಿ   

ಹೆಡಿಂಗ್ಲೆ, ಲೀಡ್ಸ್‌: ಈಗಾಗಲೇ ಸೆಮಿಫೈನಲ್‌ ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ಶನಿವಾರ ಶ್ರೀಲಂಕಾ ಎದುರು ಔಪಚಾರಿಕೆ ಪಂದ್ಯವಾಡುತ್ತಿದೆ. ಟಾಸ್‌ ಗೆದ್ದ ಶ್ರೀಲಂಕಾ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ.ಬೂಮ್ರಾ ಬಹುಬೇಗ ಎರಡು ವಿಕೆಟ್‌ ಕಬಳಿಸುವ ಮೂಲಕ ಶ್ರೀಲಂಕಾಗೆಆಘಾತ ನೀಡಿದರು.

ಶ್ರೀಲಂಕಾ ನಿಗದಿತ 50ಓವರ್‌ಗಳಲ್ಲಿ 7ವಿಕೆಟ್‌ ನಷ್ಟಕ್ಕೆ 264ರನ್‌ ಗಳಿಸಿತು. ಸಂಕಷ್ಟದಲ್ಲಿದ್ದ ತಂಡಕ್ಕೆಲಾಹಿರು ತಿರಿಮನ್ನೆ(53) ಮತ್ತು ಏಂಜೆಲೊ ಮ್ಯಾಥ್ಯೂಸ್‌(113) ತಾಳ್ಮೆಯಜತೆಯಾಟ ನೆರವಾಯಿತು. 55 ರನ್‌ ಗಳಿಸುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡಿದ್ದ ತಂಡ ಮ್ಯಾಥ್ಯೂಸ್‌ ಮತ್ತು ತಿರಿಮನ್ನೆ ಪ್ರದರ್ಶನದಿಂದಾಗಿ ರನ್‌ ಗಳಿಕೆ ಉತ್ತಮ ಪಡಿಸಿಕೊಂಡಿತು. ಮ್ಯಾಥ್ಯೂಸ್‌ಎರಡು ಸಿಕ್ಸರ್‌, 10ಬೌಂಡರಿ ಒಳಗೊಂಡ ಶತಕ ಸಿಡಿಸಿದರು.

ಕ್ಷಣಕ್ಷಣದ ಸ್ಕೋರ್:https://bit.ly/2FYevjH

ADVERTISEMENT

ಅವಿಷ್ಕಾ ಫರ್ನಾಂಡೊ ಮತ್ತು ಕುಶಾಲ ಮೆಂಡಿಸ್‌ಕಣದಲ್ಲಿದ್ದಾರೆ. ನಾಯಕ ದಿಮುತ್‌ ಕರುಣಾರತ್ನೆ(10) ಬಿರುಸಿನ ಆಟ ಶುರು ಮಾಡುವ ಮುನ್ನವೇ ಜಸ್‌ಪ್ರೀತ್‌ ಬೂಮ್ರಾ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. 3 ಬೌಂಡರಿ ಬಾರಿಸಿ ಉತ್ತಮ ಆಟವಾಡುತ್ತಿದ್ದಕುಶಾಲ ಪೆರೆರಾ(18) ಸಹ ಬೂಮ್ರಾ ಮೋಡಿಗೆ ಸಿಲುಕಿದರು. ಏಕದಿನ ಪಂದ್ಯಗಳಲ್ಲಿ ಬಹಳ ಬೇಗ 100 ವಿಕೆಟ್‌ ಕಬಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಬೂಮ್ರಾ ಪಾತ್ರರಾದರು.

ಈ ಟೂರ್ನಿಯ ಮೊದಲ ಪಂದ್ಯ ಆಡುತ್ತಿರುವ ರವೀಂದ್ರ ಜಡೇಜಾ ತನ್ನ ಮೊದಲ ಓವರ್‌ನ 4ನೇ ಎಸೆತದಲ್ಲಿಯೇ ಕುಶಾಲ ಮೆಂಡಿಸ್‌(3) ವಿಕೆಟ್‌ ಪಡೆಯುವ ಮೂಲಕ ಭರ್ಜರಿ ಆರಂಭ ಮಾಡಿದರು. ಲಯ ಕಂಡುಕೊಂಡಿದ್ದ ಅವಿಷ್ಕಾ ಫರ್ನಾಂಡಿಸ್‌(21) ಹಾರ್ದಿಕ್ ಪಾಂಡ್ಯ ಹಾಕಿದ ನಿಧಾನದ ಗತಿಯ ಬೌನ್ಸರ್‌ನಲ್ಲಿ ಕ್ಯಾಚ್‌ ನೀಡಿ ಹೊರ ನಡೆದರು. ಅರ್ಧ ಶತಕ ಗಳಿಸಿದ್ದ ತಿರಿಮನ್ನೆ ಕುಲದೀಪ್‌ ಯಾದವ್‌ ಎಸೆತದಲ್ಲಿ ಆಟ ಮುಗಿಸಿದರು.

ಉತ್ತಮ ಆಟಆಡಿದ ಮ್ಯಾಥ್ಯೂಸ್‌ 48ನೇ ಓವರ್‌ನಲ್ಲಿ ಬೂಮ್ರಾಗೆ ವಿಕೆಟ್‌ ನೀಡಿದರು. ಧನಂಜಯ ಡಿಸಿಲ್ವಾ(29) ತಾಳ್ಮೆಯ ಆಟದಿಂದ ತಂಡ 250ರ ಗಡಿ ದಾಟಿತು.

ಬೂಮ್ರಾ ಮೂರುವಿಕೆಟ್‌, ಪಾಂಡ್ಯ, ಕುಲದೀಪ್‌ ಯಾದವ್‌, ಭುವನೇಶ್ವರ್‌ ಹಾಗೂಜಡೇಜಾ ತಲಾ 1 ವಿಕೆಟ್‌ ಪಡೆದರು.

ಉಭಯ ತಂಡಗಳಿಗೆ ಇದು ವಿಶ್ವಕಪ್‌ ಟೂರ್ನಿಯ ಕೊನೆಯ ಪಂದ್ಯವಾಗಿದ್ದು, ಲಂಕಾ ಗೆಲುವಿನೊಂದಿಗೆ ಆಟ ಮುಗಿಸುವ ವಿಶ್ವಾಸದಲ್ಲಿದೆ. ಭಾರತ ಕೆಲವು ಪ್ರಯೋಗಗಳಿಗೆ ಮುಂದಾಗಿದೆ. ಭಾರತ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಮತ್ತು ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ಗೆ ವಿಶ್ರಾಂತಿ ನೀಡಿ ಆಲ್‌ರೌಂಡರ್‌ ರವೀಂದ್ರ ಜಡೇಜಾ ಮತ್ತು ಸ್ಪಿನ್ನರ್‌ ಕುಲ್‌ದೀಪ್‌ ಯಾದವ್‌ಗೆ ಅವಕಾಶ ನೀಡಲಾಗಿದೆ.

ಹಿಂದೆ ಶಿಖರ್‌ ಧವನ್‌ಗೆ ಪೆಟ್ಟಾದಾಗ, ಭುವನೇಶ್ವರ ಹಾಗೂ ರಾಹುಲ್‌ ಗಾಯಗೊಂಡಾಗ ಅವರ ಬದಲು ಫೀಲ್ಡಿಂಗ್‌ ನಡೆಸಿದ್ದ ಜಡೇಜಾ ಉತ್ತಮ ಕ್ಷೇತ್ರ ರಕ್ಷಣೆಯ ಮೂಲಕ ಗಮನ ಸೆಳೆದಿದ್ದರು. ಶ್ರೀಲಂಕಾ ಪರ ತಿಸಾರಾ ಪೆರೆರಾ ಮತ್ತೆ ತಂಡಕ್ಕೆ ಮರಳಿದ್ದಾರೆ.

ಶ್ರೀಲಂಕಾ ವಿರುದ್ಧ ಭಾರತ ಗೆಲುವು ಸಾಧಿಸಿ, ದಕ್ಷಿಣ ಆಫ್ರಿಕಾ ಎದುರು ಆಸ್ಟ್ರೇಲಿಯಾ ಸೋತರೆ; ಭಾರತ 15 ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನಕ್ಕೇರಲಿದೆ. ಆಸ್ಟ್ರೇಲಿಯಾ ಕೂಡ ಗೆಲುವು ಕಂಡರೆ, ಕಾಂಗರೂ ಪಡೆಯೇ ಮೊದಲ ಸ್ಥಾನದಲ್ಲಿ ಉಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.