ADVERTISEMENT

ವಿಲಿಯಮ್ಸನ್‌, ಟೇಲರ್‌ ಅರ್ಧ ಶತಕ; ಕಿವೀಸ್‌ 211/5, ಆಟಕ್ಕೆ ಮಳೆ ಅಡ್ಡಿ

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 13:44 IST
Last Updated 9 ಜುಲೈ 2019, 13:44 IST
ರಾಸ್‌ ಟೇಲರ್‌ ಆಟದ ವೈಖರಿ
ರಾಸ್‌ ಟೇಲರ್‌ ಆಟದ ವೈಖರಿ    

ಮ್ಯಾನ್‌ಚೆಸ್ಟರ್‌:ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಭಾರತ–ನ್ಯೂಜಿಲೆಂಡ್‌ ಮುಖಾಮುಖಿಯಾಗಿವೆ. ರೌಂಡ್‌ರಾಬಿನ್‌ ಹಂತದಲ್ಲಿ ಉಭಯ ತಂಡಗಳ ನಡುವಿನ ಪಂದ್ಯ ಮಳೆಯಿಂದಾಗಿ ಕೊಚ್ಚಿ ಹೋಗಿತ್ತು. ಇಂದು ಗೆಲ್ಲುವ ತಂಡ ಫೈನಲ್‌ ಪ್ರವೇಶಿಸಲಿದ್ದು, ಟೀಂ ಇಂಡಿಯಾ ಬಹುತೇಕರ ಫೇವರಿಟ್‌ ತಂಡವಾಗಿದೆ. ಓಲ್ಟ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಮಂಗಳವಾರ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡನ್ಯೂಜಿಲೆಂಡ್‌ ರನ್‌ ಹರಿಯುವಿಕೆಗೆ ಭಾರತದ ಬೌಲರ್‌ಗಳು ಆರಂಭದಿಂದಲೇ ಕಡಿವಾಣ ಹಾಕಿದರು.

ನ್ಯೂಜಿಲೆಂಡ್‌ 44.4ಓವರ್‌ಗಳಲ್ಲಿ 5ವಿಕೆಟ್‌ ನಷ್ಟಕ್ಕೆ 200ರನ್‌ ಗಳಿಸಿದೆ. ತಾಳ್ಮೆಯ ಆಟದ ಮೂಲಕ ಅರ್ಧ ಶತಕ ದಾಖಲಿಸಿದ ನಾಯಕ ಕೇನ್‌ವಿಲಿಯಮ್ಸನ್‌(67; 95 ಎಸೆತ) ಟೂರ್ನಿಯಲ್ಲಿ 500 ರನ್‌ ದಾಟಿದರು, ರನ್‌ ಸರಾಸರಿ 100 ದಾಟಿದೆ. ತಂಡಕ್ಕೆ ಆಸರೆಯಾಗಿದ್ದ ವಿಲಿಯಮ್ಸನ್‌,ಯಜುವೇಂದ್ರ ಚಾಹಲ್‌ ಎಸೆತದಲ್ಲಿ ಕ್ಯಾಚ್‌ ನೀಡಿ ಆಟ ಮುಗಿಸಿದರು. ರಾಸ್‌ ಟೇಲರ್‌(59) ಮತ್ತು ಟಾಮ್‌ ಲ್ಯಾಥಮ್‌ಕಣದಲ್ಲಿದ್ದಾರೆ. ಪಂದ್ಯಕ್ಕೆ ಮಳೆಯಿಂದಾಗಿ ಅಡ್ಡಿಯಾಗಿದೆ.

ಕ್ಷಣಕ್ಷಣದ ಸ್ಕೋರ್‌:https://bit.ly/2Jp8izr

ADVERTISEMENT

ಮೊದಲ ಎರಡು ಓವರ್‌ಯಾವುದೇ ರನ್‌ ನೀಡದೆಬೂಮ್ರಾ ಮತ್ತು ಭುವನೇಶ್ವರ್‌ಒತ್ತಡ ಹೇರಿದರು. ಬೂಮ್ರಾ ತನ್ನ 2ನೇ ಓವರ್‌ನಲ್ಲಿ ಮಾರ್ಟಿನ್‌ಗಟ್ಪಿಲ್‌(1) ವಿಕೆಟ್ ಕಬಳಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ಮಾರ್ಟಿನ್‌ ಬಿರುಸಿನ ಹೊಡೆತವನ್ನು ಕ್ಯಾಚ್‌ ಆಗಿಸಿಕೊಂಡ ಕೊಹ್ಲಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.ವಿಲಿಯಮ್ಸ್ ಜತೆ ಉತ್ತಮ ಜತೆಯಾಟ ಆಡುವ ಮೂಲಕ ತಂಡದ ರನ್ ಗಳಿಕೆಗೆ ಆಸರೆಯಾದಹೆನ್ರಿ ನಿಕೋಲ್ಸ್(28) ರವೀಂದ್ರ ಜಡೇಜಾಗೆ ವಿಕೆಟ್‌ ಒಪ್ಪಿಸಿದರು.

ನಿರೀಕ್ಷೆ ಮೂಡಿಸಿದ್ದ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್(16) ಮತ್ತು ಜಿಮ್ಮಿ ನೀಶಮ್‌(12) ಇಬ್ಬರೂ ಕ್ಯಾಚ್ ನೀಡಿ ಬಹುಬೇಗ ಆಟ ಮುಗಿಸಿದರು. ಬೂಮ್ರಾ, ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌, ರವೀಂದ್ರ ಜಡೇಜಾ ಹಾಗೂ ಚಾಹಲ್‌ ತಲಾ 1 ವಿಕೆಟ್‌ ಪಡೆದರು.

ಭಾರತದ ಪರ ಬೌಲರ್‌ ಮೊಹಮ್ಮದ್‌ ಶಮಿ ಮತ್ತು ಕುಲದೀಪ್‌ ಯಾದವ್‌,ಕೇದಾರ್‌ ಜಾದವ್‌, ಮಯಾಂಕ್‌ ಅಗರ್ವಾಲ್‌ಗೆ ವಿಶ್ರಾಂತಿ ನೀಡಲಾಗಿದೆ. ದಿನೇಶ್‌ ಕಾರ್ತಿಕ್‌ ಮತ್ತು ರವೀಂದ್ರ ಜಡೇಜಾ ಕಣಕ್ಕಿಳಿದಿದ್ದಾರೆ. ಬೂಮ್ರಾ,ಭುವನೇಶ್ವರಕುಮಾರ್ ಹಾಗೂ ಯಜುವೇಂದ್ರ ಚಾಹಲ್‌ ಬೌಲಿಂಗ್‌ ಪಡೆಯ ಶಕ್ತಿಯಾಗಿದ್ದಾರೆ. ಬ್ಯಾಟಿಂಗ್‌ ನಾಲ್ಕನೇ ಕ್ರಮಾಂಕದಲ್ಲಿ ರಿಷಬ್ ಪಂತ್‌ ಮುಂದುವರಿದಿದ್ದಾರೆ.

ನ್ಯೂಜಿಲೆಂಡ್‌ ಪರ ಟಿಮ್‌ ಸೌಥಿ ಬದಲು ಲಾಕಿ ಫರ್ಗೂಸನ್‌ ಆಡುತ್ತಿದ್ದಾರೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

‘ಅಕ್ರಮಣಶೀಲ’ ನಾಯಕ ವಿರಾಟ್ ಕೊಹ್ಲಿ ಮತ್ತು ‘ಶಾಂತಸ್ವಭಾವಿ’ ಕೇನ್ ವಿಲಿಯಮ್ಸನ್ ನಡುವಣ ಹಣಾಹಣಿಯೆಂದೇ ಈ ಪಂದ್ಯವನ್ನು ಬಿಂಬಿಸಲಾಗುತ್ತಿದೆ.

2008ರಲ್ಲಿ ಕ್ವಾಲಾಲಂಪುರದಲ್ಲಿ ನಡೆದಿದ್ದ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಕೊಹ್ಲಿ ಮತ್ತು ಕೇನ್ ನಾಯಕತ್ವದ ಭಾರತ ಹಾಗೂ ಕಿವೀಸ್ ತಂಡಗಳು ಸೆಣಸಿದ್ದವು. ಅದರಲ್ಲಿ ಭಾರತ ಗೆದ್ದಿತ್ತು. ವಿಶ್ವಕಪ್ ಟೂರ್ನಿಯಲ್ಲಿ ಇಬ್ಬರೂ ಮೊದಲ ಬಾರಿಗೆ ತಮ್ಮ ದೇಶಗಳ ತಂಡಗಳ ನಾಯಕತ್ವ ವಹಿಸಿರುವುದು ವಿಶೇಷ.

ದಾಖಲೆಗಳ ಸಮಯ

ಭಾರತ ತಂಡದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಒಂದೇ ವಿಶ್ವಕಪ್‌ ಟೂರ್ನಿಯಲ್ಲಿ ಐದು ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ವಿಶ್ವಕಪ್‌ನಲ್ಲಿ ಅತ್ಯಧಿಕ ರನ್‌(647) ಪೇರಿಸಿದ ದಾಖಲೆಯನ್ನೂ ಇವರು ಹೊಂದಿದ್ದಾರೆ. ರೋಹಿತ್‌ ಇಂದು 27 ರನ್‌ ಗಳಿಸಿದರೆ ಸಚಿನ್‌ ದಾಖಲೆಯನ್ನು ಹಿಂದಿಡಲಿದ್ದಾರೆ. ಈ ಮೂಲಕ ವಿಶ್ವಕಪ್‌ ಇತಿಹಾಸದಲ್ಲಿ ಒಂದೇ ಟೂರ್ನಿಯಲ್ಲಿ ಅತ್ಯಧಿಕ ರನ್‌ ಗಳಿಸಿದ ದಾಖಲೆ ಹೊಂದಲಿದ್ದಾರೆ.53 ರನ್‌ ಗಳಿಸಿದರೆ, ವಿಶ್ವಕಪ್‌ನಲ್ಲಿ 700 ರನ್‌ ದಾಖಲಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ

2015ರಲ್ಲಿ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಭಾರತವು ನಾಲ್ಕರ ಘಟ್ಟದಲ್ಲಿ ಆಸ್ಟ್ರೇಲಿಯಾ ಎದುರು ಸೋತಿತ್ತು. ಬ್ರೆಂಡನ್ ಮೆಕ್ಲಮ್ ನಾಯಕರಾಗಿದ್ದ ಕಿವೀಸ್ ತಂಡವು ದಕ್ಷಿಣ ಆಫ್ರಿಕಾ ಎದುರು ಗೆದ್ದು ಫೈನಲ್ ತಲುಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.