ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವಾಗ ಯಾವುದೇ ಪಂದ್ಯವನ್ನೂ ತಪ್ಪಿಸದ ಅನುಭವಿ ಆಟಗಾರರು ಅಂತರರಾಷ್ಟ್ರೀಯ ಪಂದ್ಯಗಳ ಸಂದರ್ಭದಲ್ಲಿ ವಿಶ್ರಾಂತಿ ಪಡೆಯುವುದು ಯಾಕೆ ಎಂದು ಕ್ರಿಕೆಟ್ ದಿಗ್ಗಜ ಸುನಿಲ್ ಗಾವಸ್ಕರ್ ಪ್ರಶ್ನಿಸಿದ್ದಾರೆ.
ವೆಸ್ಟ್ ಇಂಡೀಸ್ ಎದುರು ನಡೆಯಲಿರುವ ಏಕದಿನ ಕ್ರಿಕೆಟ್ ಸರಣಿಯಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ಅವರು ವಿಶ್ರಾಂತಿ ಪಡೆದಿದ್ದಾರೆ. ಈ ಕುರಿತು ಗಾವಸ್ಕರ್ ಸ್ಪೋರ್ಟ್ಸ್ ಟಾಕ್ನಲ್ಲಿ ಮಾತನಾಡಿದ್ದಾರೆ.
‘ಆಟಗಾರರು ಈ ರೀತಿ ವಿಶ್ರಾಂತಿ ಪಡೆಯುವುದರ ಬಗ್ಗೆ ನನಗೆ ಅಸಮಾಧಾನವಿದೆ. ಐಪಿಎಲ್ನಲ್ಲಿ ಒಂಚೂರು ವಿಶ್ರಾಂತಿ ತೆಗೆದುಕೊಳ್ಳದವರು, ಭಾರತ ತಂಡದಲ್ಲಿ ಆಡುವಾಗ ಪದೇ ಪದೇ ತಪ್ಪಿಸುತ್ತಾರೆ. ಇದು ಅವರಿಗೆ ರಾಷ್ಟ್ರೀಯ ತಂಡದ ಕುರಿತು ಇರುವ ಬದ್ಧತೆಯ ಕೊರತೆಯೇ’ ಎಂದು ವೀಕ್ಷಕ ವಿವರಣೆಗಾರರೂ ಆಗಿರುವ ಗಾವಸ್ಕರ್ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಈ ವಿಷಯದ ಕುರಿತು ಬಿಸಿಸಿಐ ಗಮನ ಹರಿಸಬೇಕು. ಗುತ್ತಿಗೆಯಲ್ಲಿ ಎ ಗ್ರೇಡ್ ಹೊಂದಿರುವ ಆಟಗಾರರು ಉತ್ತಮ ವರಮಾನ ಗಳಿಸುತ್ತಾರೆ. ಪ್ರತಿ ಪಂದ್ಯಕ್ಕೂ ಅವರಿಗೆ ಭಾರಿ ಆದಾಯ ಇರುತ್ತದೆ. ಯಾವುದೇ ಕಂಪೆನಿಯ ಸಿಇಒ ಅಥವಾ ಎಂ.ಡಿ ಸ್ಥಾನದಲ್ಲಿರುವವರು ಎಷ್ಟು ಬಿಡುವು ಪಡೆಯುತ್ತಾರೆ ಹೇಳಿ ನನಗೆ’ ಎಂದು ಗಾವಸ್ಕರ್ ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.