ಕೋಲ್ಕತ್ತ : ಸಾಲ್ಟ್ಲೇಕ್ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ರೋಚಕ ಹೋರಾಟದಲ್ಲಿ ಕೃಷ್ಣ ರಾಯ್ ಆತಿಥೇಯ ಎಟಿಕೆ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು.
ಇಂಜುರಿ ಸಮಯದಲ್ಲಿ ಕೃಷ್ಣ ಕಾಲ್ಚಳಕದ ಬಲದಿಂದ ಎಟಿಕೆ ತಂಡವು 2–2ರಿಂದ ಮುಂಬೈ ಸಿಟಿ ತಂಎದ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೇ ಮುಂದುವರಿಯಿತು.
ಪಂದ್ಯದುಕ್ಕೂ ಉಭಯ ಆಟಗಾರರರ ಜಿದ್ದಾಜಿದ್ದಿನ ಹೋರಾಟ ಗಮನ ಸೆಳೆಯಿತು. ಕೋಲ್ಕತ್ತದ ಫುಟ್ಬಾಲ್ ಪ್ರಿಯರ ಮನತಣಿಸಿತು. ಪಂದ್ಯದ ಮೊದಲ 37 ನಿಮಿಷಗಳಲ್ಲಿ ಎರಡೂ ತಂಡಗಳ ಗೋಲು ಗಳಿಸುವ ಪ್ರಯತ್ನಗಳು ಫಲ ಕೊಡಲಿಲ್ಲ. ಆದರೆ, 38ನೇ ನಿಮಿಷದಲ್ಲಿ ಎಟಿಕೆಯ ಮಿಷೆಲ್ ಸೂಸೈರಾಜ್ ಅವರು ಹೊಡೆದ ಗೋಲಿನಿಂದಾಗಿ ತಂಡವು 1–0ಯಿಂದ ಮುನ್ನಡೆ ಗಳಿಸಿತು.
ಅದರ ನಂತರ ತಂಡವು ಹೆಚ್ಚು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿತು. 62ನೇ ನಿಮಿಷದಲ್ಲಿ ಮುಂಬೈನ ಪ್ರತೀಕ್ ಚೌಧರಿ ಎಟಿಕೆಯ ರಕ್ಷಣಾ ಕೋಟೆಯನ್ನು ಭೇದಿಸಿ ಗೋಲು ಗಳಿಸಿದರು. ಸಮಬಲ ಸಾಧಿಸಲು ಕಾರಣರಾದರು. ನಂತರ ತಂಡದ ಅವಧಿ ಮುಗಿಯುವವರೆಗೂ ಯಾರಿಗೂ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಈ ತುರುಸಿನ ಹಣಾಹಣಿಯಲ್ಲಿ ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ಮತ್ತು ತಳ್ಳಾಟಗಳೂ ನಡೆದಿವು. ಮುಂಬೈನ ಸರ್ಗಿ ಕೆವಿಯನ್, ಸುಭಾಶಿಶ್ ಬೋಸ್ ಮತ್ತು ಎಟಿಕೆಯ ಅನಾಸ್ ಎಡತೊಡಿಕಾ ಅವರು ಹಳದಿ ಕಾರ್ಡ್ ದರ್ಶನ ಮಾಡಬೇಕಾಯಿತು.
ಇಂಜುರಿಯ ಅವಧಿಯ ಮೂರನೇ ನಿಮಿಷದಲ್ಲಿಯೇ ಸರ್ಗಿ ಗೋಲು ಹೊಡೆದರು ಇದರಿಂದಾಗಿ ಮುಂಬೈ ತಂಡವು 2–1ರಿಂದ ಮುನ್ನಡೆ ಗಳಿಸಿತು. ಗೆಲುವಿನ ಆಸೆ ಚಿಗುರಿತ್ತು. ಆದರೆ, ಕೊನೆಯ ನಿಮಿಷದಲ್ಲಿ ಕೃಷ್ಣ ರಾಯ್ ಚುರುಕಿನ ಆಟಕ್ಕೆ ಮುಂಬೈ ಗೆಲುವಿನ ಆಸೆ ಕಮರಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.