ಲುಧಿಯಾನ: ಆತಿಥೇಯ ಪಂಜಾಬ್ ತಂಡವನ್ನು ಮಣಿಸಿದ ಸರ್ವಿ ಸಸ್ ತಂಡದವರು ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇಲ್ಲಿನ ಗುರುನಾನಕ್ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಫೈನಲ್ನಲ್ಲಿ ಸರ್ವಿಸಸ್ 1–0 ಗೋಲಿನಿಂದ ಗೆದ್ದಿತು. ಪಂದ್ಯದ ಏಕೈಕ ಗೋಲು ಗಳಿಸಿದವರು ಬಿಕಾಸ್ ಥಾಪ.
ಒಂದು ಪಂದ್ಯವನ್ನೂ ಸೋಲದೆ ಫೈನಲ್ ಪ್ರವೇಶಿಸಿದ್ದ ಸರ್ವಿಸಸ್ ಅಮೋಘ ಆಟವಾಡಿ ಎದುರಾಳಿಗಳನ್ನು ಕಂಗೆಡಿಸಿತು. ಎರಡೂ ತಂಡಗಳು ಆಕ್ರಮಣದೊಂದಿಗೆ ರಕ್ಷಣೆಗೂ ಒತ್ತು ನೀಡಿದ ಕಾರಣ ಜಿದ್ದಾಜಿದ್ದಿನ ಹೋರಾಟಕ್ಕೆ ಪ್ರೇಕ್ಷಕರು ಸಾಕ್ಷಿಯಾದರು.
ಬಿಕಾಸ್ ಥಾಪ ಆರಂಭದಿಂದಲೇ ಅತ್ಯುತ್ತಮ ಆಟದ ಮೂಲಕ ಭರವಸೆ ಮೂಡಿಸಿದರು. ಮೊದಲಾರ್ಧದ ಮುಕ್ತಾಐಕ್ಕೆ ನಿಮಿಷಗಳು ಉಳಿದಿರುವಾಗ ಎದುರಾಳಿ ತಂಡದ ಆವರಣಕ್ಕೆ ನುಗ್ಗಿದ ಬಿಕಾಸ್ ಚೆಂಡನ್ನು ಗುರಿಯತ್ತ ಒದ್ದರು. ಆದರೆ ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ.
ವಿರಾಮದ ನಂತರ ತಂಡ ನಿರ್ದಿಷ್ಟ ರಣತಂತ್ರದೊಂದಿಗೆ ಕಣಕ್ಕೆ ಇಳಿಯಿತು. ಇದಕ್ಕೆ ಫಲವೂ ಸಿಕ್ಕಿತು. ತಂಡ ಈ ಹಿಂದೆ 2015ರಲ್ಲಿ ಪ್ರಶಸ್ತಿ ಗೆದ್ದಿತ್ತು. ಒಟ್ಟಾರೆ ಇದು ತಂಡ ಗೆದ್ದ ಆರನೇ ಪ್ರಶಸ್ತಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.