ADVERTISEMENT

ಭಾರತದ ಥಾಮಸ್‌ ಕಪ್‌ ಸಾಧನೆ: 'ಸೊಳ್ಳೆ ಬ್ಯಾಟ್‌'ನಿಂದ ಅಣಕ, ಅಮಿತ್‌ ಮಿಶ್ರಾ ಗರಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮೇ 2022, 7:23 IST
Last Updated 17 ಮೇ 2022, 7:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅಮೋಘ ಸಾಧನೆ ಮಾಡಿದ ಭಾರತ ತಂಡದ ಕುರಿತು'ಸೊಳ್ಳೆ ಬ್ಯಾಟ್' ಚಿತ್ರವನ್ನು ಬಳಸಿ ಟ್ವೀಟ್‌ ಮಾಡಿದ್ದಐಎಎಸ್‌ ಅಧಿಕಾರಿಯನ್ನು ಕ್ರಿಕೆಟಿಗ ಅಮಿತ್‌ ಮಿಶ್ರಾ ತರಾಟೆಗೆ ತೆಗೆದುಕೊಂಡಿದ್ದಾರೆ.

'ಬ್ಯಾಡ್ಮಿಂಟನ್‌ನಲ್ಲಿ ಭಾರತ ತಂಡವು ತಮಗಿಂತ ಹೇಗೆ ಉತ್ತಮಗೊಂಡಿದೆ ಎಂಬುದರ ಬಗ್ಗೆ ಇಂಡೋನೇಷ್ಯಾವು ಆಶ್ಚರ್ಯಗೊಂಡಿದೆ' ಎಂದು ಟ್ವೀಟ್‌ ಮಾಡಿರುವ ಐಎಎಸ್‌ ಅಧಿಕಾರಿ ಸೋಮೇಶ್‌ ಉಪಾಧ್ಯಾಯ ಅವರು ಸೊಳ್ಳೆ ಹೊಡೆಯುವ ಬ್ಯಾಟ್‌ ಚಿತ್ರವನ್ನು ಟ್ವೀಟ್‌ನಲ್ಲಿ ಪ್ರಕಟಿಸಿದ್ದಾರೆ.

ಸೋಮೇಶ್‌ ಉಪಾಧ್ಯಾಯ ಅವರ ಟ್ವೀಟ್‌ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಅಮಿತ್‌ ಮಿಶ್ರಾ, 'ಇದು ಕೇವಲ ಅಸಹ್ಯಕರ ಮಾತ್ರವಲ್ಲ, ನಮ್ಮ ಬ್ಯಾಡ್ಮಿಂಟನ್‌ ಹೀರೋಗಳ ಸಾಧನೆಗೆ ಮಾಡಿದ ಅವಮಾನ' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಹದಿನಾಲ್ಕು ಬಾರಿಯ ಚಾಂಪಿಯನ್ ಇಂಡೊನೇಷ್ಯಾವನ್ನು ಸೋಲಿಸಿದ ಭಾರತ ತಂಡ ಮೊದಲ ಬಾರಿ ಚಿನ್ನದ ಪದಕ ಗಳಿಸಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸಂಪೂರ್ಣ ಆಧಿಪತ್ಯ ಮೆರೆದ ಭಾರತ 3–0ಯಿಂದ ಜಯ ಗಳಿಸಿದೆ.

ಭಾರತ ಈ ಹಿಂದೆ 13 ಬಾರಿ ಥಾಮಸ್ ಕಪ್ ಟೂರ್ನಿಯಲ್ಲಿ ಆಡಿತ್ತು. 1979ರಲ್ಲಿ ಇಂಡೊನೇಷ್ಯಾದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು ಗರಿಷ್ಠ ಸಾಧನೆಯಾಗಿತ್ತು. ಆ ವರ್ಷ ನಾಲ್ಕರ ಘಟ್ಟದಲ್ಲಿ ಭಾರತ ತಂಡ ಡೆನ್ಮಾರ್ಕ್‌ಗೆ ಮಣಿದಿತ್ತು. ಈ ಬಾರಿ ಆರಂಭದಲ್ಲೇ ಕ್ಲೀನ್ ಸ್ವೀಪ್ ಸಾಧನೆ ಮಾಡಿದ ತಂಡ ನಂತರ ಅಮೋಘ ಸಾಮರ್ಥ್ಯ ಪ್ರದರ್ಶಿಸಿತ್ತು. ಮೊದಲ ಬಾರಿ ಫೈನಲ್ ಪ್ರವೇಶಿಸಿದ ತಂಡ ಈ ಅವಕಾಶವನ್ನು ಚಿನ್ನದ ಸಾಧನೆಯನ್ನಾಗಿ ಪರಿವರ್ತಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.