ADVERTISEMENT

ಪ್ರೊ ಕಬಡ್ಡಿ ಲೀಗ್‌ | ಬೆಂಗಳೂರು ಬುಲ್ಸ್‌ ತಂಡಕ್ಕೆ ನಿರಾಶೆ; ಯೋಧಾಗೆ ಜಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 4:15 IST
Last Updated 10 ಜನವರಿ 2022, 4:15 IST
ಬೆಂಗಳೂರು ಬುಲ್ಸ್ ತಂಡದ ಭರತ್ ಅವರನ್ನು ಹಿಡಿದ ಯು.ಪಿ.ಯೋಧಾ ಟ್ಯಾಕ್ಲರ್‌ಗಳು
ಬೆಂಗಳೂರು ಬುಲ್ಸ್ ತಂಡದ ಭರತ್ ಅವರನ್ನು ಹಿಡಿದ ಯು.ಪಿ.ಯೋಧಾ ಟ್ಯಾಕ್ಲರ್‌ಗಳು   

ಬೆಂಗಳೂರು: ಶ್ರೀಕಾಂತ್‌ ಜಾಧವ್ ಮಾಡಿದ ಮೋಡಿಯಿಂದ ಯುಪಿ ಯೋಧಾ ತಂಡವು ಬೆಂಗಳೂರು ಬುಲ್ಸ್‌ ಎದುರು ಜಯಭೇರಿ ಮೊಳಗಿಸಿತು.

ವೈಟ್‌ಫೀಲ್ಡ್‌ನ ಶೆರಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆಯುತ್ರಿರುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಯುಪಿ ಯೋಧಾ ತಂಡವು 42–27ರಿಂದ ಬುಲ್ಸ್‌ ಎದುರು ಜಯಿಸಿತು.

ಯೋಧಾ ತಂಡದ ಶ್ರೀಕಾಂತ್ 15 ಅಂಕಗಳನ್ನು ಗಳಿ ಸುವ ಮೂಲಕ ತಂಡದ ಜಯದ ರೂವಾರಿಯಾದರು. ಬುಲ್ಸ್ ತಂಡದ ಪವನ್ ಶೆರಾವತ್ ಅವರನ್ನು ನಿಯಂತ್ರಿಸುವಲ್ಲಿ ಎದುರಾಳಿ ರಕ್ಷಣಾಪಡೆ ಯಶಸ್ವಿಯಾಯಿತು. ಪವನ್ 17 ಬಾರಿ ರೇಡ್‌ ಮಾಡಿದರು. ಆದರೆ ತಂದಿದ್ದು ಐದು ಅಂಕಗಳನ್ನು ಮಾತ್ರ.

ADVERTISEMENT

ಭರತ್ 11 ಅಂಕಗಳನ್ನು ಗಳಿಸಿ ದರೂ ತಂಡಕ್ಕೆ ಜಯ ಒಲಿಯಲಿಲ್ಲ. ಯುಪಿ ತಂಡದ ನಾಯಕ ಮತ್ತು ಡಿಫೆಂಡರ್ ನಿತೀಶ್ ಕುಮಾರ್ ಮೂರು ಅಂಕಗಳನ್ನು ಗಳಿಸಿದರು.

ಒಟ್ಟು ಎಂಟು ಪಂದ್ಯಗಳನ್ನು ಆಡಿರುವ ಬೆಂಗಳೂರು ತಂಡಕ್ಕೆ ಇದು ಎರಡನೇ ಸೋಲು. ಒಂದು ಪಂದ್ಯದಲ್ಲಿ ಟೈ ಮಾಡಿಕೊಂಡಿದೆ. ಉಳಿದದ್ದರಲ್ಲಿ ಜಯಿಸಿದೆ.

ಪುಣೇರಿ ಪಲ್ಟನ್ ಜಯಭೇರಿ: ಅಸ್ಲಂ ಇನಾಂದಾರ್‌ ಗಳಿಸಿದ 17 ಅಂಕಗಳ ನೆರವಿನಿಂದ ಪುಣೇರಿ ಪಲ್ಟನ್ ತಂಡವು 39–27ರಿಂದ ಬೆಂಗಾಲ್ ವಾರಿಯರ್ಸ್ ಎದುರು ಜಯಿಸಿತು.

ಬೆಂಗಾಲ್ ತಂಡದ ನಾಯಕ ಮಣಿಂದರ್ ಸಿಂಗ್ (13 ಅಂಕ) ಕೂಡ ಉತ್ತಮವಾಗಿ ಆಡಿದರು. ಅವರಿಗೆ ಆಕಾಶ್ ಪೀಕಳಮುಂದೆ ಎಂಟು ಅಂಕ ಗಳಿಸಿ ನಾಯಕನಿಗೆ ಉತ್ತಮ ಬೆಂಬಲ ನೀಡಿದರು. ಆದರೆ, ಪುಣೇರಿ ಆಟಗಾರರ ಚುರುಕುತನದ ಮುಂದೆ ಬೆಂಗಾಲ್ ಮಂಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.