ADVERTISEMENT

ಸೈಕ್ಲಿಂಗ್‌: ಕರ್ನಾಟಕ ತಂಡಕ್ಕೆ ಸಮಗ್ರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 19:45 IST
Last Updated 22 ಫೆಬ್ರುವರಿ 2020, 19:45 IST
 ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಜಯಿಸಿದ ಕರ್ನಾಟಕ ತಂಡದವರು
 ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಜಯಿಸಿದ ಕರ್ನಾಟಕ ತಂಡದವರು   

ಹುಬ್ಬಳ್ಳಿ: ಕರ್ನಾಟಕ ತಂಡದವರು ಉತ್ತರಖಾಂಡದ ಹಲ್ದಾಣಿಯಲ್ಲಿ ನಡೆದ 16ನೇ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‍ಷಿಪ್‌ನಲ್ಲಿ ಶನಿವಾರ ಸಮಗ್ರ ಪ್ರಶಸ್ತಿ ಜಯಿಸಿದ್ದಾರೆ.

ರಾಜ್ಯ ತಂಡ ಐದನೇ ಬಾರಿಗೆ ಈ ಸಾಧನೆ ಮಾಡಿದೆ. ಹಿಂದೆ 2012, 2015ರಲ್ಲಿ ಎರಡು ಬಾರಿ ಮತ್ತು 2018ರಲ್ಲಿಯೂ ಸಮಗ್ರ ಪ್ರಶಸ್ತಿ ಪಡೆದುಕೊಂಡಿತ್ತು. ಸಬ್‌ ಜೂನಿಯರ್‌, ಜೂನಿಯರ್‌ ವಿಭಾಗದಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆಯಿತು. ಒಟ್ಟಾರೆಯಾಗಿ 14 ಪದಕಗಳಿಂದ 48 ಅಂಕಗಳನ್ನು ಗಳಿಸಿದರೆ, ಕೇರಳ ಎಂಟು ಪದಕಗಳಿಂದ 30 ಅಂಕಗಳನ್ನು ಕಲೆಹಾಕಿ ರನ್ನರ್ಸ್ ಅಪ್‌ ಆಯಿತು.

ಸ್ಪರ್ಧೆಯ ಕೊನೆಯ ದಿನ 14 ವರ್ಷದೊಳಗಿನ ಬಾಲಕರ ವಿಭಾಗದ ಎರಡು ಲ್ಯಾಪ್ ಮಾಸ್ಡ್‌ ಸ್ಟಾರ್ಟ್‌ನಲ್ಲಿ ವಿಜಯಪುರ ಸೈಕ್ಲಿಂಗ್ ಕ್ರೀಡಾ ನಿಲಯದ ರಾಘವೇಂದ್ರ ವಂದಾಲ ಚಿನ್ನ ಪಡೆದರೆ, 16 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮೈಸೂರಿನ ಚರಿತಗೌಡ ಚಿನ್ನ, ಮೈಸೂರಿನ ಲಕ್ಷ್ಮೀಶ ಬೆಳ್ಳಿ ಪದಕ ಜಯಿಸಿದರು.

ADVERTISEMENT

18 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮೈಸೂರಿನ ಆಡೊನೀಸ್ ಟಂಗ್ಟು ಮೂರು ಲ್ಯಾಪ್ ವೈಯಕ್ತಿಕ ಟೈಮ್‌ ಟ್ರಯಲ್ಸ್‌ನಲ್ಲಿ 32:41.190 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರೆ, ಚರಿತಗೌಡ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

18 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ವಿಜಯಪುರ ಸೈಕ್ಲಿಂಗ್‌ ಕ್ರೀಡಾ ನಿಲಯದ ದಾನಮ್ಮ ಗುರವ ಎರಡು ಲ್ಯಾಪ್ಸ್‌ ವೈಯಕ್ತಿಕ ಟೈಮ್‌ ಟ್ರಯಲ್ಸ್‌ನಲ್ಲಿ ‌45ನಿಮಿಷ 47.592 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಜಯಿಸಿದದರು. ಐದು ಲ್ಯಾಪ್ಸ್‌ ಮಾಸ್ಡ್‌ ಸ್ಟಾರ್ಟ್‌ನಲ್ಲಿಯೂ ದಾನಮ್ಮ ಬೆಳ್ಳಿ ಪಡೆದರು.

ಇದೇ ವಿಭಾಗದಲ್ಲಿ ಬಾಗಲಕೋಟೆ ಸೈಕ್ಲಿಂಗ್ ಕ್ರೀಡಾ ನಿಲಯದ ಅಕ್ಷತಾ ಬಿರಾದಾರ ಕಂಚು, ಪುರುಷರ ವಿಭಾಗದ 7 ಲ್ಯಾಪ್‌ ಮಾಸ್ಡ್‌ ಸ್ಟಾರ್ಟ್‌ನಲ್ಲಿ ಬೆಂಗಳೂರಿನ ಕೆ. ಕಿರಣಕುಮಾರ ರಾಜು ಕಂಚು ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.