ADVERTISEMENT

ದಸರಾ ಸೈಕ್ಲಿಂಗ್: ಶ್ರೀಧರ್‌, ಭಾವನಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 18:11 IST
Last Updated 2 ಅಕ್ಟೋಬರ್ 2019, 18:11 IST
   

ಮೈಸೂರು: ಶ್ರೀಧರ್‌ ಎನ್‌.ಸವನೂರ ಮತ್ತು ಭಾವನಾ ಎಂ.ಪಾಟೀಲ ಅವರು ದಸರಾ ಅಂಗವಾಗಿ ಬುಧವಾರ ಆಯೋಜಿಸಿದ್ದ ಸೈಕ್ಲಿಂಗ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಚಾಂಪಿಯನ್‌ ಆದರು.

ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಅನುಭವ ಹೊಂದಿರುವ ಬಾಗಲಕೋಟೆಯ ಶ್ರೀಧರ್‌ ಅವರು 90 ಕಿ.ಮೀ. ಸ್ಪರ್ಧೆಯ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡು ಅಗ್ರಸ್ಥಾನ ಪಡೆದರು. ಬಾಗಲಕೋಟೆಯ ರಾಜು ಎ. ಬಾಟಿ ಮತ್ತು ಬಸಪ್ಪ ಎಂ.ತೇರದಾಳ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.

ಮಹಿಳೆಯರಿಗೆ ಆಯೋಜಿಸಿದ್ದ 50 ಕಿ.ಮೀ. ಸ್ಪರ್ಧೆಯಲ್ಲಿ ಭಾವನಾ ಮೊದಲ ಸ್ಥಾನ ಗಳಿಸಿದರು. ವಿಜಯಪುರದ ಸ್ಪರ್ಧಿಗಳಾದ ಪಾಯಲ್‌ ಕೆ.ಚವಾಣ್ ಮತ್ತು ಸೌಮ್ಯಾ ಸಿ.ಅಂತಪುರ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ADVERTISEMENT

ಪುರುಷರ ವಿಭಾಗದಲ್ಲಿ 180 ಮತ್ತು ಮಹಿಳೆಯರ ವಿಭಾಗದಲ್ಲಿ 80 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಎರಡೂ ವಿಭಾಗಗಳಲ್ಲಿ ಮೊದಲ ಆರು ಸ್ಥಾನಗಳನ್ನು ಪಡೆದವರು ಕ್ರಮವಾಗಿ ₹ 30 ಸಾವಿರ, ₹ 25 ಸಾವಿರ, ₹ 20 ಸಾವಿರ, ₹ 15 ಸಾವಿರ, ₹ 10 ಸಾವಿರ ಮತ್ತು ₹ 5 ಸಾವಿರ ನಗದು ಬಹುಮಾನ ಪಡೆದುಕೊಂಡರು.

ಫಲಿತಾಂಶದ ವಿವರ: ಪುರುಷರ ವಿಭಾಗ: ಶ್ರೀಧರ್‌ ಎನ್‌.ಸವನೂರ (ಬಾಗಲಕೋಟೆ)–1, ರಾಜು ಎ ಬಾಟಿ (ಬಾಗಲಕೋಟೆ)–2, ಬಸಪ್ಪ ಎಂ.ತೇರದಾಳ (ಬಾಗಲಕೋಟೆ)–3, ಸಂತೋಷ್‌ ವಿ.ವಿಭೂತಿಹಳ್ಳಿ (ಗದಗ)–4, ಸಂತೋಷ್ ಎಸ್‌.ಕುರಣಿ (ವಿಜಯಪುರ)–5, ಬಸವರಾಜ್‌ ಟಿ.ಬಾಗಲಕೋಟೆ (ಬಾಗಲಕೋಟೆ)–6

ಮಹಿಳೆಯರ ವಿಭಾಗ: ಭಾವನಾ ಎಂ.ಪಾಟೀಲ (ಬಾಗಲಕೋಟೆ)–1, ಪಾಯಲ್‌ ಕೆ.ಚವಾಣ್ (ವಿಜಯಪುರ)–2, ಸೌಮ್ಯಾ ಸಿ.ಅಂತಪುರ (ವಿಜಯಪುರ)–3, ದಾನಮ್ಮ ಕೆ.ಜಿ (ವಿಜಯಪುರ)–4, ರೇಣಿಕಾ ಪಿ.ದಂಡಿನ್ (ಬಾಗಲಕೋಟೆ)–5, ಕಾವೇರಿ ಮುರ್ನಾಲ್ (ವಿಜಯಪುರ)–6

ಬಿದ್ದು ಗಾಯಗೊಂಡ ಯಲುಗುರೇಶ್

ಕಳೆದ ದಸರಾದಲ್ಲಿ ಪುರುಷರ ‘ಟೀಮ್‌ ಟೈಮ್‌ ಟ್ರಯಲ್’ ವಿಭಾಗದಲ್ಲಿ ಚಾಂಪಿಯನ್‌ ಆಗಿದ್ದ ವಿಜಯಪುರ ತಂಡದಲ್ಲಿದ್ದ ಯಲುಗುರೇಶ್‌ ಗಡ್ಡಿ ಅವರಿಗೆ ದುರದೃಷ್ಟ ಕಾಡಿತು. ಸ್ಪರ್ಧೆ ಆರಂಭವಾಗಿ ಸುಮಾರು 3 ಕಿ.ಮೀ ಕ್ರಮಿಸಿದಾಗ ಬಿದ್ದು ಸ್ಪರ್ಧೆಯಿಂದ ಹಿಂದೆ ಸರಿದರು. ಅವರ ಎಡಗೈ ಮಣಿಕಟ್ಟಿನ ಮೂಳೆ ಮುರಿದಿದೆ.

‘ನನ್ನ ಮುಂದಿದ್ದ ಸೈಕ್ಲಿಸ್ಟ್‌ ಬಿದ್ದರು. ಅವರ ಸೈಕಲ್‌ಗೆ ತಾಗಿ ನಾನೂ ಬಿದ್ದುಬಿಟ್ಟೆ. ತುಂಬಾ ನಿರಾಸೆಯಾಗಿದೆ’ ಎಂದು ಯಲುಗುರೇಶ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.