
ಆ್ಯಂಡರ್ಸ್ ಆಂಟೊನ್ಸನ್
(ಇನ್ಸ್ಟಾಗ್ರಾಮ್ ಚಿತ್ರ)
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರಗೊಂಡಿರುವುದರಿಂದ ಪ್ರಸ್ತುತ ಸಾಗುತ್ತಿರುವ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ವಿಶ್ವ ನಂ.3 ಆಟಗಾರ, ಡೆನ್ಮಾರ್ಕ್ನ ಆ್ಯಂಡರ್ಸ್ ಆಂಟೊನ್ಸನ್ ಹೇಳಿದ್ದಾರೆ.
'ಸತತ ಮೂರನೇ ಸಲವೂ ಇಂಡಿಯಾ ಓಪನ್ನಿಂದ ನಾನು ಏಕೆ ಹಿಂದೆ ಸರಿದಿದ್ದೇನೆ ಎಂದು ತಿಳಿದುಕೊಳ್ಳಲು ಹಲವಾರು ಮಂದಿ ಕುತೂಹಲದಿಂದ ಇದ್ದಾರೆ. ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರವಾಗಿದ್ದು, ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸಲು ಸೂಕ್ತ ಪ್ರದೇಶವೆಂದು ನಾನು ಭಾವಿಸುವುದಿಲ್ಲ' ಎಂದು ಆಂಟೊನ್ಸನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿದ್ದಾರೆ.
ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಆಂಡರ್ಸ್ ತಮ್ಮ ಈ ನಿರ್ಧಾರಕ್ಕಾಗಿ 5,000 ಅಮೆರಿಕನ್ ಡಾಲರ್ ದಂಡ ತೆರಬೇಕಾಗಿದೆ ಎಂದು ತಿಳಿದು ಬಂದಿದೆ.
9,50,000 ಅಮೆರಿಕನ್ ಡಾಲರ್ ಪ್ರಶಸ್ತಿ ಮೊತ್ತ ಹೊಂದಿರುವ ಬಿಡಬ್ಲ್ಯುಎಫ್ ಟೂರ್ನಿಯಲ್ಲಿ ಆಡುವ ಪರಿಸ್ಥಿತಿ ಬಗ್ಗೆ ಮಿಯಾ ಬ್ಲಿಚ್ಫೆಲ್ಡ್ಟ್ ಸಹ ಟೀಕೆ ಮಾಡಿದ್ದರು.
ದೆಹಲಿ ವಾಯು ಗುಣಮಟ್ಟ ಸೂಚ್ಯಂಕದ ಚಿತ್ರವನ್ನು ಡೆನ್ಮಾರ್ಕ್ನ ಆಟಗಾರ ಹಂಚಿಕೊಂಡಿದ್ದಾರೆ. ಇದರಲ್ಲಿ ಎಕ್ಯೂಐ 388 ಇದೆ.
ಪ್ರತಿ ವರ್ಷ ಚಳಿಗಾಲದಲ್ಲಿ ದೆಹಲಿಯ ವಾಯು ಗುಣಮಟ್ಟ ಕುಸಿಯುತ್ತಿದ್ದು, ನಗರವು ದಟ್ಟ ಹೊಗೆಯಿಂದ ಆವರಿಸಿರುತ್ತದೆ. ಇದು ಅಪಾಯಕಾರಿ ಎಂದು ವೈದ್ಯರು ತಿಳಿಸಿದ್ದಾರೆ.
ಇಂಡಿಯಾ ಓಪನ್ ಟೂರ್ನಿಯನ್ನು ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ.
(ಕೃಪೆ: ಆ್ಯಂಡರ್ಸ್ ಆಂಟೊನ್ಸನ್/ಇನ್ಸ್ಟಾಗ್ರಾಮ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.