ರೂರ್ಕೆಲ, ಒಡಿಶಾ: ಸುಖಜೀತ್ ಸಿಂಗ್ ಗಳಿಸಿದ ಎರಡು ಗೋಲುಗಳ ಬಲದಿಂದ ಭಾರತ ಹಾಕಿ ತಂಡವು ಎಫ್ಐಎಚ್ ಪ್ರೊ ಲೀಗ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಜರ್ಮನಿ ತಂಡಕ್ಕೆ ಆಘಾತ ನೀಡಿತು.
ಶುಕ್ರವಾರ ಇಲ್ಲಿಯ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 3-2ರಿಂದ ಜರ್ಮನಿ ವಿರುದ್ಧ ಗೆದ್ದಿತು.
ನಾಯಕ ಹರ್ಮನ್ಪ್ರೀತ್ ಸಿಂಗ್ ಅವರು 30ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.
ವಿಶ್ವಕಪ್ ಟೂರ್ನಿಯಲ್ಲಿ ಮಿಂಚಲು ವಿಫಲರಾಗಿದ್ದ ಹರ್ಮನ್ಪ್ರೀತ್ ಇಲ್ಲಿ ಲಯ ಕಂಡುಕೊಂಡರು. ಈ ವರ್ಷ ನಡೆದ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ಫೈನಲ್ನಲ್ಲಿ ಭಾರತ ಸೋತಿತ್ತು.
26 ವರ್ಷದ ಸುಖಜೀತ್ ಸಿಂಗ್ 31 ಮತ್ತು 42ನೇ ನಿಮಿಷಗಳಲ್ಲಿ ಕೈಚಳಕ ತೋರಿದರು.
44ನೇ ನಿಮಿಷದಲ್ಲಿ ಕೌಫ್ಮನ್ ಪಾಲ್ ಫಿಲಿಪ್ ಮತ್ತು 57ನೇ ನಿಮಿಷದಲ್ಲಿ ಸ್ಟ್ರಥೊಫ್ ಮೈಕೆಲ್ ಗಳಿಸಿದ ಗೋಲುಗಳಿಂದ ಜರ್ಮನಿ ತಂಡದ ಹಿನ್ನಡೆ ತಗ್ಗಿತು. ಆದರೆ ಸೋಲು ತಪ್ಪಲಿಲ್ಲ.
ಜರ್ಮನಿ ತಂಡಕ್ಕೆ ಆರು ಪೆನಾಲ್ಟಿ ಕಾರ್ನರ್ ಅವಕಾಶಗಳು ದೊರೆತವು. ಆದರೆ ಗೋಲುಗಳಾಗಿ ಪರಿವರ್ತಿಸಲು ವಿಫಲವಾಯಿತು. ಭಾರತಕ್ಕೆ ನಾಲ್ಕು ಪೆನಾಲ್ಟಿ ಕಾರ್ನರ್ ಲಭಿಸಿದವು.
ಭಾರತ ತಂಡವು ಭಾನುವಾರ ಆಸ್ಟ್ರೇಲಿಯಾ ಸವಾಲು ಎದುರಿಸಲಿದೆ. ಸೋಮವಾರ ಎರಡನೇ ಲೆಗ್ ಪಂದ್ಯದಲ್ಲಿ ಮತ್ತೆ ಜರ್ಮನಿ ಎದುರು ಸೆಣಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.