ತಿರುವನಂತಪುರ: ಭಾರತ ಹಾಕಿ ತಂಡದ ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ ಅವರಿಗೆ ಅಬುಧಾಬಿಯಲ್ಲಿ ನೆಲೆಸಿರುವ ಭಾರತದ ಉದ್ಯಮಿ ಡಾ.ಶಂಷೇರ್ ವಯಾಲಿಲ್ ಅವರು ₹1 ಕೋಟಿ ನಗದು ಬಹುಮಾನ ಘೋಷಿಸಿದ್ದಾರೆ.
ಒಲಿಂಪಿಕ್ಸ್ ಹಾಕಿಯಲ್ಲಿ ಪುರುಷರ ತಂಡ 41 ವರ್ಷಗಳ ಬಳಿಕ ಪದಕ ಗೆದ್ದು ಇತಿಹಾಸ ಬರೆದಿತ್ತು. ತಂಡದ ಕಂಚಿನ ಸಾಧನೆಯಲ್ಲಿ ಕೇರಳದ ಶ್ರೀಜೇಶ್ ಅವರ ಪಾತ್ರ ಮಹತ್ವದ್ದೆನಿಸಿತ್ತು.
‘ತಂಡವು ಕಂಚಿನ ಪದಕ ಜಯಿಸುವಲ್ಲಿ ಶ್ರೀಜೇಶ್, ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅವರ ಸಾಧನೆಯನ್ನು ಪರಿಗಣಿಸಿ ನಾವು ನಗದು ಬಹುಮಾನ ಘೋಷಿಸಿದ್ದೇವೆ’ ಎಂದು ವಿಪಿಎಸ್ ಹೆಲ್ತ್ಕೇರ್ನ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶಂಷೇರ್, ಸೋಮವಾರ ಟ್ವೀಟ್ ಮಾಡಿದ್ದಾರೆ.
ಜರ್ಮನಿ ಎದುರಿನ ‘ಪ್ಲೇ ಆಫ್’ ಹಣಾಹಣಿಯಲ್ಲಿ ಭಾರತ 5–4 ಗೋಲುಗಳಿಂದ ಮುನ್ನಡೆ ಗಳಿಸಿತ್ತು. ಅಂತಿಮ ಕ್ವಾರ್ಟರ್ನ ಆಟ ಮುಗಿಯಲು ಆರು ಸೆಕೆಂಡುಗಳು ಬಾಕಿ ಇದ್ದಾಗ ಜರ್ಮನಿಗೆ ಪೆನಾಲ್ಟಿ ಕಾರ್ನರ್ ಲಭಿಸಿತ್ತು. ಈ ಅವಕಾಶದಲ್ಲಿ ಶ್ರೀಜೇಶ್ ಎದುರಾಳಿಗಳ ಗೋಲುಗಳಿಕೆಯ ಪ್ರಯತ್ನವನ್ನು ವಿಫಲಗೊಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.