ಏಷ್ಯನ್ ಕ್ರೀಡಾಕೂಟದ
ಮನಾಮಾ (ಬಹರೇನ್): ಹದಿನಾಲ್ಕು ವರ್ಷದ ಕನಿಷ್ಕಾ ಬಿಧುರಿ ಮತ್ತು ಅರವಿಂದ್ ಅವರು ಸೋಮವಾರ ಏಷ್ಯನ್ ಯೂತ್ ಗೇಮ್ಸ್ನ ಕುರಾಶ್ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದರು.
ಕನಿಷ್ಕಾ ಅವರು ಬಾಲಕಿಯರ 52 ಕೆಜಿ ವಿಭಾಗದ ಫೈನಲ್ನಲ್ಲಿ 0–3ರಿಂದ ಉಜ್ಬೇಕಿಸ್ತಾನದ ಕರಿಮೋವಾ ಮುಬಿನಾಬೋನುಗೆ ಅವರಿಗೆ ಮಣಿದು, ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಇದಕ್ಕೂ ಮೊದಲು ಸೆಮಿಫೈನಲ್ನಲ್ಲಿ ಕನಿಷ್ಕಾ 10–0 ಅಂತರದಿಂದ ಜಲಲೋದ್ದೀನ್ ಸೆಟಾಯೇಶ್ ವಿರುದ್ಧ ಗೆದ್ದು ಪ್ರಶಸ್ತಿ ಸುತ್ತು ಪ್ರವೇಶಿಸಿದ್ದರು. ಕ್ವಾರ್ಟರ್ ಫೈನಲ್ನಲ್ಲಿ ಥಾಯ್ಲೆಂಡ್ನ ಖುಂಡಿ ವಾರಾಚಯಾ ಎದುರು ಗೆಲುವು ಸಾಧಿಸಿದ್ದರು.
ಬಾಲಕರ 83 ಕೆಜಿ ವಿಭಾಗದಲ್ಲಿ ಅರವಿಂದ ಅವರು ಕಂಚಿನ ಪದಕದ ಹೋರಾಟದಲ್ಲಿ 10–0ಯಿಂದ ದವ್ಲಾಟ್ಜೋಡಾ ವಿರುದ್ಧ ಗೆಲುವು ಸಾಧಿಸಿದರು. ಸೆಮಿಫೈನಲ್ನಲ್ಲಿ ಅರವಿಂದ 0–10ರಿಂದ ಉಜ್ಬೇಕಿಸ್ತಾನದ ಗೋಲಿಬೊವ್ ಶೋಹ್ಜಾಹೋನ್ ವಿರುದ್ಧ ಸೋತಿದ್ದರು.
15 ವರ್ಷದ ಖುಷಿ ಭಾನುವಾರ ಬಾಲಕಿಯರ 70 ಕೆಜಿ ಕುರಾಶ್ ಸ್ಪರ್ಧೆಯಲ್ಲಿ ಕಂಚಿನ ಪದಕದೊಂದಿಗೆ ಭಾರತದ ಪರ ಮೊದಲ ಪದಕ ಗೆದ್ದಿದ್ದರು.
ಇದೇ 31ರವರೆಗೆ ನಡೆಯಲಿರುವ ಕೂಟದಲ್ಲಿ 222 ಮಂದಿಯ ಭಾರತ ಅಥ್ಲೀಟುಗಳ ತಂಡ ಭಾಗವಹಿಸುತ್ತಿದೆ. ಇದರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಮಹಿಳೆಯರಿದ್ದಾರೆ.
21 ವಿವಿಧ ಪದಕ ಸ್ಪರ್ಧೆಗಳಲ್ಲಿ ಭಾರತ ತಂಡ ಭಾಗವಹಿಸುತ್ತಿದೆ. ತಂಡದಲ್ಲಿ 119 ಮಂದಿ ಮಹಿಳಾ ಅಥ್ಲೀಟುಗಳು, 103 ಮಂದಿ ಪುರುಷ ಅಥ್ಲೀಟುಗಳು ಇದ್ದಾರೆ. ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ ದತ್ ಅವರು ತಂಡದ ಷೆಫ್–ಡಿ– ಮಿಷನ್ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.