ಹರ್ಮನ್ಪ್ರೀತ್
ಪ್ಯಾರಿಸ್: ಗೆಲುವಿನೊಡನೆ ಅಭಿಯಾನ ಆರಂಭಿಸಿದ ಭಾರತ ತಂಡ, ಸೋಮವಾರ ನಡೆಯುವ ಒಲಿಂಪಿಕ್ಸ್ ಹಾಕಿ ಸ್ಪರ್ಧೆಯ ತನ್ನ ಎರಡನೇ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು ಎದುರಿಸಲಿದ್ದು, ಸ್ಥಿರ ಪ್ರದರ್ಶನವನ್ನು ಮುಂದುವರಿಸುವ ಗುರಿಯನ್ನು ಹೊಂದಿದೆ.
ಶನಿವಾರ ನಡೆದ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಹರ್ಮನ್ಪ್ರೀತ್ ನೇತೃತ್ವದ ಭಾರತ ತಂಡ 3–2 ಗೋಲುಗಳಿಂದ ನ್ಯೂಜಿಲೆಂಡ್ ತಂಡವನ್ನು ಎಉದರಿಸಲಿತ್ತು. ಆದರೆ ಈ ಜಯಕ್ಕಾಗಿ ಭಾರತ ಸಾಕಷ್ಟು ಬೆವರುಹರಿಸಬೇಕಾಯಿತು. ಪಂದ್ಯದ ಕೊನೆಯ ಕ್ಷಣದಲ್ಲಿ ಹರ್ಮನ್ಪ್ರೀತ್ ‘ಪೆನಾಲ್ಟಿ’ ಸ್ಟ್ರೋಕ್ ಪರಿವರ್ತಿಸಿದ್ದರಿಂದ ಭಾರತ ಗೆಲುವು ಪಡೆಯುವಲ್ಲಿ ಯಶಸ್ವಿಯಾಯಿತು.
ಆರ್ಜೆಂಟೀನಾ ವಿರುದ್ಧದ ಪಂದ್ಯವೂ ಕಠಿಣವಾಗುವ ನಿರೀಕ್ಷೆಯಿದೆ. ದಕ್ಷಿಣ ಅಮೆರಿಕದ ಈ ತಂಡದ ‘ಮ್ಯಾನ್–ಟು–ಮ್ಯಾನ್’ ಕಾರ್ಯತಂತ್ರವು ಭಾರತದ ಮಿಡ್ಫೀಲ್ಡ್ಗೆ ಸತ್ವ ಪರೀಕ್ಷೆ ಆಗಲಿದೆ.
ಭಾರತ ತಂಡಕ್ಕೆ ಈ ಪಂದ್ಯದ ನಂತರ ಹಾಲಿ ಚಾಂಪಿಯನ್ ಬೆಲ್ಜಿಯಂ, ಪ್ರಬಲ ಆಸ್ಟ್ರೇಲಿಯಾ, ಐರ್ಲೆಂಡ್ ವಿರುದ್ಧ ಪಂದ್ಯಗಳನ್ನು ಆಡಲು ಇದೆ. ಹೀಗಾಗಿ ಸೋಮವಾರದ ಪಂದ್ಯದಲ್ಲಿ ಜಯ ಮಹತ್ವದ ಪಾತ್ರ ವಹಿಸಲಿದೆ. ಈ ಪಂದ್ಯ ಗೆದ್ದಲ್ಲಿ ಭಾರತದ ಕ್ವಾರ್ಟರ್ಫೈನಲ್ ಪ್ರವೇಶವೂ ಹೆಚ್ಚುಕಮ್ಮಿ ಖಚಿತವಾಗಲಿದೆ.
‘ಎ’ ಮತ್ತು ‘ಬಿ’ ಗುಂಪಿನಲ್ಲಿ ತಲಾ ಆರು ತಂಡಗಳಿದ್ದು ಮೊದಲ ನಾಲ್ಕು ಸ್ಥಾನ ಗಳಿಸುವ ತಂಡಗಳು, ಕ್ವಾರ್ಟರ್ಫೈನಲ್ ಪ್ರವೇಶಿಸಲಿವೆ.
ಭಾರತದ ಅನುಭವಿ ಗೋಲ್ಕೀಫರ್ ಪಿ.ಆರ್.ಶ್ರೀಜೇಶ್, ಕೊನೆಯ ಅಂತರರಾಷ್ಟ್ರೀಯ ಟೂರ್ನಿ ಆಡುತ್ತಿದ್ದು, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಗೋಡೆಯಂತೆ ನಿಂತು ಗೆಲುವಿಗೆ ನೆರವಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.