ADVERTISEMENT

‘ಆರಂಭದಲ್ಲೇ ಗೋಲು ಗಳಿಸಿ ಒತ್ತಡ ಹೆಚ್ಚಿಸಿ’

ನೂತನ ತಂತ್ರದೊಂದಿಗೆ ಯಶಸ್ಸು ಕಾಣುತ್ತಿರುವ ಭಾರತ ಹಾಕಿ ತಂಡ

ಪಿಟಿಐ
Published 11 ಜೂನ್ 2019, 19:45 IST
Last Updated 11 ಜೂನ್ 2019, 19:45 IST
ಕೋಚ್‌ ಗ್ರಹಾಂ ರೀಡ್‌
ಕೋಚ್‌ ಗ್ರಹಾಂ ರೀಡ್‌   

ಭುವನೇಶ್ವರ: ಕೋಚ್‌ ಗ್ರಹಾಂ ರೀಡ್‌ ನೇತೃತ್ವದಲ್ಲಿ ಭಾರತ ಹಾಕಿ ತಂಡ ಹೊಸ ತಂತ್ರಗಳೊಂದಿಗೆ ಆಟದಲ್ಲಿ ಯಶಸ್ಸು ಕಾಣುತ್ತಿದೆ. ಆರಂಭದಲ್ಲೇ ಅವಕಾಶಗಳನ್ನು ಸೃಷ್ಟಿಸಿ ಗೋಲು ಗಳಿಸುವುದು, ಆ ಮೂಲಕ ಎದುರಾಳಿಯ ಮೇಲೆ ಒತ್ತಡ ಹೇರುವುದು ಮನ್‌ಪ್ರೀತ್‌ ಪಡೆಯ ನೂತನ ತಂತ್ರ.

ಎಫ್‌ಐಎಚ್‌ ಸಿರೀಸ್‌ ಫೈನಲ್ಸ್‌ನಲ್ಲಿ ಸದ್ಯ ಈ ತಂತ್ರದೊಂದಿಗೆ ದುರ್ಬಲ ತಂಡಗಳ ವಿರುದ್ಧ ಯಶಸ್ಸು ಕಂಡಿರುವ ಭಾರತ, ಅದೇ ಮಟ್ಟದ ಪ್ರದರ್ಶನವನ್ನು ಬಲಿಷ್ಠ ತಂಡಗಳ ಎದುರು ನೀಡಬೇಕಿದೆ.

‘ಮೊದಲ ಐದು ನಿಮಿಷಗಳಲ್ಲಿ ಎರಡರಿಂದ ಮೂರು ಅವಕಾಶಗಳನ್ನು ಸೃಷ್ಟಿಸಿಳ್ಳುವೆವು. ಆದರೆ ಇದು ಯಾವ ತಂಡದ ವಿರುದ್ಧ ನಾವು ಆಡುತ್ತಿದ್ದೇವೆ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಈ ತಂತ್ರವನ್ನು ಖಂಡಿತ ನಾವು ಬಳಸಿಕೊಳ್ಳಬೇಕು’ ಎಂದು ಕೋಚ್‌ ರೀಡ್‌ ಹೇಳುತ್ತಾರೆ.

ADVERTISEMENT

ಹೋದ ಪಂದ್ಯದಲ್ಲಿ ಉಜ್ಬೆಕಿಸ್ತಾನ ವಿರುದ್ಧ ಹ್ಯಾಟ್ರಿಕ್‌ ಬಾರಿಸಿದ್ದ ಸ್ಟ್ರೈಕರ್‌ ಆಕಾಶದೀಪ್‌ ಸಿಂಗ್‌ ಅವರು ಕೋಚ್‌ ಮಾತಿಗೆ ಸಹಮತ ವ್ಯಕ್ತಪಡಿಸಿದರು.

‘ಇಂತಹ ಟೂರ್ನಿಗಳಲ್ಲಿ ಯಾವುದೇ ತಂಡವನ್ನು ಹಗುರವಾಗಿ ತೆಗೆದುಕೊಳ್ಳು ಸಾಧ್ಯವಿಲ್ಲ. ಆದರೆ ಸಕಾರಾತ್ಮಕ ಮನೋಭಾವದೊಂದಿಗೆ ಪದ್ಯವಾಡುವತ್ತ ನಮ್ಮ ಚಿತ್ತವಿರಬೇಕು. ಆರಂಭದಲ್ಲೇ ಗೋಲು ದಾಖಲಿಸುವ ಮೂಲಕ ಎದುರಾಳಿಯ ಮೇಲೆ ಒತ್ತಡ ಹೇರಬೇಕು’ ಎಂದು ಅವರು ಹೇಳಿದರು.

ಮಲೇಷ್ಯಾ ಜಯಭೇರಿ: ಎಫ್‌ಐಎಚ್‌ ಸಿರೀಸ್‌ ಫೈನಲ್ಸ್‌ ಟೂರ್ನಿಯಲ್ಲಿ ಮಂಗಳವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಮಲೇಷ್ಯಾ ತಂಡ ಜೆಕ್‌ ಗಣರಾಜ್ಯ ವಿರುದ್ಧ 3–1 ಗೋಲುಗಳಿಂದ ಜಯಿಸಿತು.

ವಿಜೇತ ತಂಡದ ಪರ ಸಾಯ್‌ಯುಟಿ ನೊರ್‌ಫೈಜಾ (28ನೇ ನಿಮಿಷ), ಸಿಲ್ವಸ್ಟರ್‌ ಫಾಜಿಲ್ಲಾ (47ನೇ ನಿಮಿಷ) ಹಾಗೂ ಸುಕ್ರಿ ಫ್ಯಾಟಿನ್‌ (54ನೇ ನಿಮಿಷ) ತಲಾ ಒಂದು ಗೋಲು ಹೊಡೆದರು. ಜೆಕ್‌ ತಂಡಕ್ಕೆ ಲೆಹೊಕೊವಾ ಅವರು 47ನೇ ನಿಮಿಷದಲ್ಲಿ ಏಕೈಕ ಗೋಲು ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.