ಚಿಕ್ಕಮಗಳೂರು: ಕಾಫಿನಾಡಿನ ಅಂಬರ್ ವ್ಯಾಲಿ ಶಾಲೆ ಆವರಣದಲ್ಲಿ ಶುಕ್ರವಾರ ನಡೆದ ಐಎನ್ಆರ್ಸಿ (ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್) ನಾಲ್ಕನೇ ಸುತ್ತಿನ ಸೂಪರ್ ಸ್ಪೆಷಲ್ ಹಂತದಲ್ಲಿ ಅಗ್ರ ಶ್ರೇಯಾಂಕದ ಚಾಲಕ ನವದೆಹಲಿಯ ಗೌರವ್ ಗಿಲ್, ಸಹಚಾಲಕ ಕಾಸರಗೋಡಿನ ಮೂಸಾ ಷರೀಫ್ ಅವರು ಶರವೇಗದಲ್ಲಿ ಕಾರು ಚಲಾಯಿಸಿ ಮೆಚ್ಚುಗೆ ಗಳಿಸಿದರು.
ಕಾಫಿ ಡೇ ಪ್ರಾಯೋಜಕತ್ವದಲ್ಲಿ ಚಿಕ್ಕಮಗಳೂರು ಮೋಟಾರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಪ್ರೇಕ್ಷಕ ಕೇಂದ್ರಿತ ಸೂಪರ್ ಸ್ಪೆಷಲ್ ಹಂತದಲ್ಲಿ 2.12 ಕಿಲೋ ಮೀಟರ್ ಓರೆಕೊರೆ ಮಾರ್ಗವನ್ನು ಮಹೀಂದ್ರಾ ಅಡ್ವೆಂಚರ್ ತಂಡದ ಗೌರವ್ ಗಿಲ್ –ಮುಸಾ ಷರೀಫ್ ಅವರು 2 ನಿಮಿಷ 34 ಸೆಕೆಂಡುಗಳಲ್ಲಿ ಕ್ರಮಿಸಿ ರೇಸ್ ಪ್ರಿಯರಿಗೆ ಮುದ ನೀಡಿದರು.
ಕೋಲ್ಕತ್ತದ ಅಮಿತ್ರಾಜಿತ್ ಘೋಷ್ ಮತ್ತು ಸಹಚಾಲಕ ಮಂಗಳೂರಿನ ಅಶ್ವಿನ್ ನಾಯಕ್ ಅವರು 2 ನಿಮಿಷ 35 ಸೆಕೆಂಡುಗಳಲ್ಲಿ ಕ್ರಮಿಸಿ ಪ್ರೇಕ್ಷರನ್ನು ಪುಳಕಗೊಳಿಸಿದರು.
ಅರ್ಕಾ ಮೋಟಾರ್ ಸ್ಪೋರ್ಟ್ಸ್ ತಂಡದ ಕರ್ಣ ಕಡೂರು ಮತ್ತು ನಿಖಿಲ್ ವಿಠ್ಠಲ್ ಪೈ ಅವರು 2 ನಿಮಿಷ 36 ಸೆಕೆಂಡುಗಳಲ್ಲಿ ಕ್ರಮಿಸಿದರು. ಸ್ಪರ್ಧೆಯಲ್ಲಿ 46 ಕಾರುಗಳು ಭಾಗವಹಿಸಿದ್ದವು. ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ನವದೆಹಲಿ ಮೊದಲಾದ ರಾಜ್ಯಗಳ ತಂಡಗಳು ಪಾಲ್ಗೊಂಡಿವೆ. ಅಂಕುಡೊಂಕಿನ ಹಾದಿಯ ತಿರುವುಗಳಲ್ಲಿ ಕಾರುಗಳ ಚಿಣ್ಣಾಟ ನೋಡಿ ಪ್ರೇಕ್ಷಕರು ಸಂಭ್ರಮಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.