ಟೋಕಿಯೊ (ಪಿಟಿಐ): ಇಂಡೊನೇಷ್ಯಾ ಓಪನ್ ಟೂರ್ನಿಯ ಫೈನಲ್ವರೆಗೂ ತಲುಪಿ ಸೋತ ಭಾರತದ ಪಿ.ವಿ. ಸಿಂಧು, ಮಂಗಳವಾರದಿಂದ ನಡೆಯುವ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ನಿರಾಸೆ ಮರೆಯುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿರುವರು.
ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 750 ಟೂರ್ನಿಯಾಗಿರುವ ಇದು ₹ 5 ಕೋಟಿಗೂ ಅಧಿಕ ಬಹುಮಾನ ಮೊತ್ತವನ್ನು ಹೊಂದಿದೆ.
ಫಿಟ್ನೆಸ್ ಸಮಸ್ಯೆಯ ಹಿನ್ನೆಲೆಯಲ್ಲಿ ಇಂಡೊನೇಷ್ಯಾ ಓಪನ್ ಟೂರ್ನಿಯಿಂದ ಹಿಂದೆ ಸರಿದಿದ್ದ ಸೈನಾ ನೆಹ್ವಾಲ್ ಕೂಡ ಈ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿರುವರು. ಭಾನುವಾರ ನಡೆದ ಇಂಡೊನೇಷ್ಯಾ ಓಪನ್ ಫೈನಲ್ ಪಂದ್ಯದಲ್ಲಿ ಜಪಾನ್ನ ಅಕಾನೆ ಯಮಗುಚಿ ಎದುರು ಸಿಂಧು ಎಡವಿದ್ದರು.
ಜಪಾನ್ ಓಪನ್ನ ಮೊದಲ ಪಂದ್ಯದಲ್ಲಿ ಸಿಂಧು, ಚೀನಾದ ಹಾನ್ ಯು ವಿರುದ್ಧ ಸೆಣಸುವರು. ಒಂದು ವೇಳೆ ಐದನೇ ಶ್ರೇಯಾಂಕದ ಭಾರತದ ಆಟಗಾರ್ತಿ ಕ್ವಾರ್ಟರ್ಫೈನಲ್ ತಲುಪಿದರೆ ಯಮಗುಚಿ ಅವರನ್ನು ಮತ್ತೊಮ್ಮೆ ಎದುರಿಸುವ ಸಾಧ್ಯತೆಯಿದೆ.
ಟೂರ್ನಿಯಲ್ಲಿ ಎಂಟನೇ ಶ್ರೇಯಾಂಕ ಪಡೆದಿರುವ ಸೈನಾ, ಥಾಯ್ಲೆಂಡ್ನ ಬುಸಾನನ್ ಒಂಗ್ಬಮ್ರುಂಗ್ಫನ್ ಎದುರು ಮೊದಲ ಪಂದ್ಯ ಆಡುವರು. ಬುಸಾನನ್ ವಿರುದ್ಧ ಸೈನಾ 3–1 ಗೆಲುವಿನ ದಾಖಲೆ ಹೊಂದಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಎಚ್.ಎಸ್.ಪ್ರಣಯ್ ಹಾಗೂ ಕಿದಂಬಿ ಶ್ರೀಕಾಂತ್ ಮಧ್ಯೆಯೇ ಮೊದಲ ಸುತ್ತಿನ ಹಣಾಹಣಿ ನಡೆಯಲಿದೆ. ಭಾರತದ ಇತರ ಸಿಂಗಲ್ಸ್ ಸ್ಪರ್ಧಿಗಳಲ್ಲಿ ಬಿ. ಸಾಯಿ ಪ್ರಣೀತ್ ಅವರು ಜಪಾನ್ನ ಕೆಂಟಾ ನಿಶಿಮೊಟೊ ಎದುರು, ಸಮೀರ್ ವರ್ಮಾ ಅವರು ಡೆನ್ಮಾರ್ಕ್ನ ಆ್ಯಂಡ್ರೆಸ್ ಅಂಟೊನ್ಸೆನ್ ವಿರುದ್ಧ ಆಡಲಿರುವರು.
ಪುರುಷರ ಡಬಲ್ಸ್ ವಿಭಾಗದಲ್ಲಿ ಮನು ಅತ್ರಿ–ಸುಮೀತ್ ರೆಡ್ಡಿ, ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ–ಚಿರಾಗ್ ಶೆಟ್ಟಿ, ಮಹಿಳಾ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ– ಎನ್ ಸಿಕ್ಕಿ ರೆಡ್ಡಿ, ಮಿಶ್ರ ಡಬಲ್ಸ್ನಲ್ಲಿ ಪ್ರಣವ್ ಜೆರಿ ಚೋಪ್ರಾ– ಸಿಕ್ಕಿ ಹಾಗೂ ಸಾತ್ವಿಕ್ ಸಾಯಿರಾಜ್–ಅಶ್ವಿನಿ ಪೊನ್ನಪ್ಪ ಅವರು ಕಣಕ್ಕಿಳಿಯಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.