
ಕಬಡ್ಡಿ
ಬೆಂಗಳೂರು: ಕೆಂಪೇಗೌಡ ತಂಡ, ಶುಕ್ರವಾರ ಯಂಗ್ಸ್ಟರ್ಸ್ ಕಬಡ್ಡಿ ಕ್ಲಬ್ ಆಶ್ರಯದಲ್ಲಿ ಆರಂಭವಾದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ 23–13 ರಲ್ಲಿ ಹತ್ತು ಪಾಯಿಂಟ್ಗಳಿಂದ ಬಿಸಿವೈಎ ತಂಡವನ್ನು ಸೋಲಿಸಿತು.
ಕೋದಂಡರಾಮಪುರ ಆಟದ ಮೈದಾನದಲ್ಲಿ ಎಸ್.ಬಿ.ಶಿವಲಿಂಗಯ್ಯ–ಚಿನ್ನಸ್ವಾಮಿ ರೆಡ್ಡಿ ಸ್ಮರಣಾರ್ಥ ನಡೆಯುತ್ತಿರುವ ಟೂರ್ನಿಯ ಈ ಪಂದ್ಯದಲ್ಲಿ ವಿರಾಮದ ವೇಳೆ ವಿಜೇತ ತಂಡ 11–4 ರಿಂದ ಮುಂದಿತ್ತು. ಉತ್ತರಾರ್ಧದಲ್ಲಿ ಹೋರಾಟ ಕಂಡುಬಂತು.
ಇನ್ನೊಂದು ಪಂದ್ಯದಲ್ಲಿ ಚಿಕ್ಕಬಾಣಾವರ ತಂಡ 34–22 ರಲ್ಲಿ 8 ಪಾಯಿಂಟ್ಗಳಿಂದ ಬಾಪೂಜಿ ತಂಡವನ್ನು ಮಣಿಸಿತು. ಮೊದಲಾರ್ಧದಲ್ಲಿ ಬಾಪೂಜಿ ತಂಡ 13–11 ಮುನ್ನಡೆ ಸಾಧಿಸಿತ್ತು. ಯಂಗ್ಸ್ಟರ್ಸ್ ತಂಡ 35–28ರಲ್ಲಿ ಏಳು ಪಾಯಿಂಟ್ಗಳಿಂದ ಬಯಲಾಂಜನೇಯ ತಂಡವನ್ನು ಪರಾಭವಗೊಳಿಸಿತು.
ಕ್ಲಾಸಿಕ್ ನ್ಯಾಷನಲ್ ತಂಡ 62–31 ರಿಂದ ವೈಎಫ್ಎ ಹೆಬ್ಬಾಳ ತಂಡವನ್ನು, ಬಾಸ್ ಈಸ್ ಬ್ಯಾಕ್ ತಂಡ 26–24 ರಿಂದ ಭಗತ್ ಬಾಯ್ಸ್ ತಂಡವನ್ನು ಸೋಲಿಸಿದವು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಟೂರ್ನಿಯನ್ನು ಉದ್ಘಾಟಿಸಿದರು. ಧಾರ್ಮಿಕ ದತ್ತಿ ಇಲಾಖೆ ಸದಸ್ಯ ಕೆ.ಎಂ.ನಾಗರಾಜ್, ಯಂಗ್ಸ್ಟರ್ಸ್ ಕಬಡ್ಡಿ ಕ್ಲಬ್ ಅಧ್ಯಕ್ಷ ಬಿ.ಕೆ.ಶಿವರಾಂ, ಮಾಜಿ ಮೇಯರ್ ಜಿ.ಹುಚ್ಚಪ್ಪ, ಮಾಜಿ ಅಂತರರಾಷ್ಟ್ರೀಯ ಆಟಗಾರ ಹೊನ್ನಪ್ಪ ಗೌಡ, ವಸಂತ ಚಿನ್ನಸ್ವಾಮಿ ರೆಡ್ಡಿ, ಆಶಾ ಸೋಮಶೇಖರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.