ADVERTISEMENT

ಬಾಸ್ಕೆಟ್‌ಬಾಲ್‌: ಭಾರತ ತಂಡ ಕಳುಹಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 12:39 IST
Last Updated 24 ನವೆಂಬರ್ 2020, 12:39 IST
ಇರಾಕ್ ವಿರುದ್ಧ ನಡೆದ ಪಂದ್ಯದಲ್ಲಿ ಚೆಂಡಿನೊಂದಿಗೆ ಮುನ್ನುಗ್ಗಿದ ಭಾರತ ತಂಡದ ನಾಯಕ ವಿಶೇಷ್ ಭೃಗುವಂಶಿ –ಫಿಬಾ ಚಿತ್ರ
ಇರಾಕ್ ವಿರುದ್ಧ ನಡೆದ ಪಂದ್ಯದಲ್ಲಿ ಚೆಂಡಿನೊಂದಿಗೆ ಮುನ್ನುಗ್ಗಿದ ಭಾರತ ತಂಡದ ನಾಯಕ ವಿಶೇಷ್ ಭೃಗುವಂಶಿ –ಫಿಬಾ ಚಿತ್ರ   

ಬೆಂಗಳೂರು: ಏಷ್ಯಾಕಪ್ ಬಾಸ್ಕೆಟ್‌ಬಾಲ್ ಅರ್ಹತಾ ಟೂರ್ನಿಯ ಗುಂಪು ಹಂತದಲ್ಲಿ ಉಳಿದಿರುವ ಪಂದ್ಯಗಳಿಗೆ ಭಾರತ ತಂಡವನ್ನು ಕಳುಹಿಸಲು ಭಾರತ ಬಾಸ್ಕೆಟ್‌ಬಾಲ್ ಫೆಡರೇಷನ್ ನಿರ್ಧರಿಸಿದೆ. ಭಾರತ ಕ್ರೀಡಾ ಪ್ರಾಧಿಕಾರದ ಮಹಾನಿರ್ದೇಶಕ ಸಂದೀಪ್ ಪ್ರಧಾನ್ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಫೆಡರೇಷನ್ ಅಧ್ಯಕ್ಷ ಕೆ.ಗೋವಿಂದರಾಜ್ ತಿಳಿಸಿದ್ದಾರೆ.

ಕರ್ನಾಟಕದ ಅನಿಲ್ ಕುಮಾರ್ ಬೂಕನಕೆರೆ ಅವರು ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. 12 ಮಂದಿಯ ತಂಡವನ್ನು ಫೆಡರೇಷನ್ ಪ್ರಕಟಿಸಿದ್ದು ಪಂಜಾಬ್‌ನ ಮೂವರು, ತಮಿಳುನಾಡಿನ ಇಬ್ಬರು, ಕೇರಳ, ರಾಜಸ್ಥಾನ, ಉತ್ತರಾಖಂಡ, ಗುಜರಾತ್‌, ಚಂಡೀಗಢ ಮತ್ತು ಒಎನ್‌ಜಿಸಿಯ ತಲಾ ಒಬ್ಬರಿಗೆ ಸ್ಥಾನ ಲಭಿಸಿದೆ.

ಅರ್ಹತಾ ಸುತ್ತಿನ ವಿಂಡೋಡ್‌–2ರಲ್ಲಿ ಭಾರತ ತಂಡ ಡಿ ಗುಂಪಿನಲ್ಲಿ ಸ್ಥಾನ ಗಳಿಸಿದೆ. ಲಾಕ್‌ಡೌನ್‌ಗಿಂತ ಮೊದಲು ತಂಡ ಎರಡು ಪಂದ್ಯಗಳನ್ನು ಆಡಿದ್ದು ಇನ್ನು ಎರಡು ಪಂದ್ಯಗಳು ಇವೆ. ಮೂರನೇ ಪಂದ್ಯ ಇದೇ 27ರಂದು ಲೆಬನಾನ್ ವಿರುದ್ಧ ಮತ್ತು ನಾಲ್ಕನೇ ಪಂದ್ಯ 29ರಂದು ಬಹರೇನ್ ವಿರುದ್ಧ ನಡೆಯಲಿದೆ. ಫೆಬ್ರುವರಿಯಲ್ಲಿ ನಡೆದ ಇರಾಕ್ ವಿರುದ್ಧದ ಪಂದ್ಯದಲ್ಲಿ ಭಾರತ 94–75ರಲ್ಲಿ ಜಯ ಗಳಿಸಿತ್ತು. ಅದಕ್ಕೂ ಮೊದಲು ಬಹರೇನ್‌ಗೆ ಒಂದು ಪಾಯಿಂಟ್ ಅಂತರದಲ್ಲಿ(67–68) ಮಣಿದಿತ್ತು. ಮನಾಮದಲ್ಲಿ ಜೀವಸುರಕ್ಷಾ ವಿಧಾನದಡಿ ಟೂರ್ನಿ ಮುಂದುವರಿಯಲಿದೆ.

ADVERTISEMENT

ತಂಡ: ವಿಶೇಷ್ ಭೃಗುವಂಶಿ (ನಾಯಕ–ಒಎನ್‌ಜಿಸಿ), ಮುಯೀನ್ ಹಫೀಜ್‌, ಪ್ರಸನ್ನ ಶಿವಕುಮಾರ್ (ತಮಿಳುನಾಡು), ಪ್ರಿನ್ಸ್‌ಪಾಲ್ ಸಿಂಗ್, ಜಗದೀಪ್ ಸಿಂಗ್, ಅಮ್ಜ್ಯೋತ್ ಸಿಂಗ್ (ಪಂಜಾಬ್), ಪ್ರಶಾಂತ್ ಸಿಂಗ್ ರಾವತ್ (ಉತ್ತರಾಖಂಡ್‌), ಸಹಜ್ ಕುಮಾರ್ ಪಟೇಲ್ (ಗುಜರಾತ್), ಸಹಜ್ ಪ್ರತಾಪ್ (ಚಂಡೀಗಢ), ಅನಿಲ್ ಕುಮಾರ್ ಬೂಕನಕೆರೆ (ಕರ್ನಾಟಕ), ಸೆಜಿನ್ ಮ್ಯಾಥ್ಯೂ (ಕೇರಳ), ಶರದ್ (ರಾಜಸ್ಥಾನ). ವೆಸೆಲಿನ್ ಮ್ಯಾಟಿಕ್ (ಮುಖ್ಯ ಕೋಚ್‌), ಮೋಹಿತ್ ಭಂಡಾರಿ, ಪ್ರದೀಪ್ ತೋಮರ್ (ಕೋಚ್‌ಗಳು), ಸತೀಶ್ ಸಜ್ಜನರ್ (ಮ್ಯಾನೇಜರ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.