ADVERTISEMENT

ಫೆ.28ರಿಂದ ಕರ್ನಾಟಕ ಶೂಟಿಂಗ್ ಲೀಗ್: ಕೃತಾರ್ಥ, ಅನುಷ್ಕಾಗೆ ಬಂಪರ್‌ ಮೌಲ್ಯ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 14:42 IST
Last Updated 17 ಫೆಬ್ರುವರಿ 2026, 14:42 IST
ಅನುಷ್ಕಾ ತೋಕೂರು
ಅನುಷ್ಕಾ ತೋಕೂರು   

ಬೆಂಗಳೂರು: ಅನುಭವಿ ಶೂಟರ್‌ ಕೃತಾರ್ಥ ದೇವಾಂಗಿ ಸವ್ಯಸಾಚಿ ಮತ್ತು ಉದಯೋನ್ಮುಖ ತಾರೆ ಅನುಷ್ಕಾ ಎಚ್‌. ತೋಕೂರ್‌ ಅವರು ‘ಕರ್ನಾಟಕ ಶೂಟಿಂಗ್ ಲೀಗ್’ ಟೂರ್ನಿಗಾಗಿ ಮಂಗಳವಾರ ನಡೆದ ಬಿಡ್‌ನಲ್ಲಿ ಬಂಪರ್‌ ಮೌಲ್ಯ ಪಡೆದರು.

ಕರ್ನಾಟಕ ರಾಜ್ಯ ರೈಫಲ್ ಸಂಸ್ಥೆಯು ಇದೇ ಮೊದಲ ಬಾರಿಗೆ ಶೂಟಿಂಗ್‌ ಲೀಗ್‌ ಆಯೋಜಿಸಿದೆ. ಫೆ.28ರಂದು ಅರ್ಹತಾ ಸುತ್ತು, ಮಾರ್ಚ್‌ 1ರಂದು ಪ್ರಶಸ್ತಿ ಸುತ್ತು ನಡೆಯಲಿದೆ. ಈ ಪ್ರಯುಕ್ತ ನಗರದ ಹೋಟೆಲ್ ಚಾನ್ಸೇರಿ ಪೆವಿಲಿಯನ್‌ನಲ್ಲಿ ಮಂಗಳವಾರ ಶೂಟರ್‌ಗಳ ಬಿಡ್ಡಿಂಗ್‌ ಪ್ರಕ್ರಿಯೆ ನಡೆಯಿತು.

ಬಿಡ್ಡಿಂಗ್‌ನಲ್ಲಿ ಒಟ್ಟು 136 ಶೂಟರ್‌ಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 88 ಮಂದಿ ಎಂಟು ಫ್ರ್ಯಾಂಚೈಸಿಗಳಿಗೆ ಹಂಚಿಹೋದರು. ತಲಾ ₹1.75 ಕೋಟಿ ಥೈಲಿಯೊಂದಿಗೆ ಫ್ರ್ಯಾಂಚೈಸಿಗಳು ಬಿಡ್‌ನಲ್ಲಿ ಭಾಗವಹಿಸಿ, ತಮಗೆ ಬೇಕಿದ್ದ 11 ಶೂಟರ್‌ಗಳನ್ನು ತೆಕ್ಕೆಗೆ ಹಾಕಿಕೊಂಡವು. 

ADVERTISEMENT

ಸ್ಕೀಟ್ ಪರಿಣತ ಕೃತಾರ್ಥ ಅವರು ₹44 ಲಕ್ಷ ಮೊತ್ತ ಪಡೆದರು. ಇದು ಈ ಲೀಗ್‌ನಲ್ಲಿಯೇ ಗರಿಷ್ಠ ಮೊತ್ತವಾಗಿದೆ. 10 ಮೀಟರ್‌ ಮತ್ತು 50 ಮೀ. ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಅನುಷ್ಕಾ ₹43 ಲಕ್ಷ ಮೌಲ್ಯ ಪಡೆದರು. ಇದು ಎರಡನೇ ಗರಿಷ್ಠ ಮೊತ್ತವಾಗಿದೆ. ಇವರಿಬ್ಬರೂ ಬೆಂಗಳೂರು ಬ್ರಿಗೇಡ್‌ ತಂಡದ ತೆಕ್ಕೆಗೆ ಜಾರಿದರು.

ಉಳಿದಂತೆ ಮಮಿತ್‌ ಗೌಡ (₹42 ಲಕ್ಷ) ಮಂಗಳೂರು ರ‍್ಯಾಪ್ಟರ್ಸ್‌ ತಂಡಕ್ಕೆ, ಒಮರ್‌ ಬಿನ್‌ ಜಂಗ್‌ (₹41 ಲಕ್ಷ) ಹುಬ್ಬಳ್ಳಿ ಶೂಟಿಂಗ್‌ ಸ್ಟಾರ್‌ ತಂಡಕ್ಕೆ, ಶ್ರವಣ್‌ ಶಶಿಧರ್‌ (₹35 ಲಕ್ಷ) ಟಾಪ್‌ ಗನ್‌ ತಂಡಕ್ಕೆ ಸೇರುವ ಮೂಲಕ ಉತ್ತಮ ಮೌಲ್ಯ ಪಡೆದರು. ಈ ಎಲ್ಲ ಶೂಟರ್‌ಗಳು ₹10 ಲಕ್ಷ ಮೂಲಬೆಲೆ ಹೊಂದಿದ್ದರು.

ತಂಡಗಳ ನಡುವೆ 10 ಮತ್ತು 25 ಮೀಟರ್‌ ಏರ್‌ ಪಿಸ್ತೂಲ್‌, 10 ಮತ್ತು 50 ಏರ್‌ ರೈಫಲ್‌ (ಪುರುಷರ ಮತ್ತು ಮಹಿಳೆಯರಿಗೆ), ಟ್ರ್ಯಾಪ್‌ ಮತ್ತು ಸ್ಕೀಟ್‌ (ಮುಕ್ತ) ಸ್ಪರ್ಧೆಗಳು ನಡೆಯಲಿವೆ. ಒಟ್ಟು ಗರಿಷ್ಠ ಅಂಕ ಗಳಿಸಿದ ತಂಡವು ಚಾಂಪಿಯನ್‌ ಆಗಲಿದೆ. ಪ್ರಶಸ್ತಿ ಗೆದ್ದ ತಂಡಕ್ಕೆ ₹4 ಲಕ್ಷ, ರನ್ನರ್‌ ಅಪ್‌ ತಂಡ ₹2 ಲಕ್ಷ, ಮೂರನೇ ಸ್ಥಾನ ಪಡೆಯುವ ತಂಡ ₹1.50 ಲಕ್ಷ ಬಹುಮಾನ ಪಡೆಯಲಿದೆ. 

ಲೀಗ್‌ನ ಎಂಟು ತಂಡಗಳು: ಕ್ಯಾಲಿಬರ್ ಕ್ಯಾಪಿಟಲ್ಸ್, ಟ್ರಿಗರ್ ಟ್ಯಾಕ್ಟಿಷಿಯನ್‌, ಬೆಂಗಳೂರು ಬ್ರಿಗೇಡ್‌, ರೆಡ್ರಮ್, ಮಂಗಳೂರು ರ‍್ಯಾಪ್ಟರ್ಸ್‌, ಟಾಪ್‌ ಗನ್ಸ್‌, ಸ್ನೈಪರ್‌ ಸ್ಕ್ವಾಡ್‌, ಹುಬ್ಬಳ್ಳಿ ಶೂಟಿಂಗ್‌ ಸ್ಟಾರ್‌

ರಾಜ್ಯದ ಖ್ಯಾತನಾಮ ಶೂಟರ್‌ಗಳಾದ ದಿವ್ಯಾ ಟಿ.ಎಸ್‌, ತಿಲೋತ್ತಮಾ ಸೇನ್‌, ಜಿ.ಎಸ್. ಶರಣ್‌ ಅವರು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದು, ಈ ಲೀಗ್‌ನಲ್ಲಿ ಭಾಗವಹಿಸುತ್ತಿಲ್ಲ ಎಂದು ಲೀಗ್‌ನ ಸಂಘಟನಾ ಸಮಿತಿ ಸದಸ್ಯ ಶರಣೇಂದ್ರ ಕೆ.ವೈ. ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ರೈಫಲ್ ಸಂಸ್ಥೆ ಗೌರವ ಕಾರ್ಯದರ್ಶಿ ಜಿ. ಸುಶೀಲ್, ಖಜಾಂಚಿ ಮುರಳಿ ವಿ. ಅವರ ಸಮ್ಮುಖದಲ್ಲಿ ಸ್ಟೀವ್ ಅವರು ಬಿಡ್ಡಿಂಗ್‌ ಪ್ರಕ್ರಿಯೆ ನಡೆಸಿಕೊಟ್ಟರು.

ಕೃತಾರ್ಥ ದೇವಾಂಗಿ ಸವ್ಯಸಾಚಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.