ಬೆಂಗಳೂರು: ಕರ್ನಾಟಕದ ಶ್ರೀಹರಿ ನಟರಾಜ್ ಮತ್ತು ನೀನಾ ವೆಂಕಟೇಶ್ ಅವರು ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ ಮಾಡಿದರು. ಕೂಟ ಐದನೇ ದಿನವಾದ ಭಾನುವಾರವೂ ಕರ್ನಾಟಕದ ಈಜುಪಟುಗಳು ಪ್ರಾಬಲ್ಯ ಮುಂದುವರಿಸಿದ್ದು, ಒಂದೇ ದಿನ ಏಳು ಪದಕ ತಮ್ಮದಾಗಿಸಿಕೊಂಡರು.
24 ವರ್ಷ ವಯಸ್ಸಿನ ಒಲಿಂಪಿಯನ್ ಶ್ರೀಹರಿ ನಟರಾಜ್ ಅವರು ಪುರುಷರ 100 ಮೀಟರ್ ಬ್ಯಾಕ್ಸ್ಟ್ರೋಕ್ ಸ್ಪರ್ಧೆಯಲ್ಲಿ 56.26 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿ ಚಾಂಪಿಯನ್ ಆದರು. ಕರ್ನಾಟಕದ ಮತ್ತೊಬ್ಬ ಈಜುಪಟು ಆಕಾಶ್ ಮಣಿ (56.36ಸೆ) ಮತ್ತು ಮಹಾರಾಷ್ಟ್ರದ ರಿಷಭ್ ದಾಸ್ (56.80ಸೆ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.
ಮಹಿಳೆಯರ 50 ಮೀಟರ್ ಬಟರ್ಫ್ಲೈ ಸ್ಪರ್ಧೆಯಲ್ಲಿ ರಾಜ್ಯದ ನೀನಾ ಮತ್ತು ಒಲಿಂಪಿಯನ್ ಧಿನಿಧಿ ದೇಸಿಂಗು ಕ್ರಮವಾಗಿ ಮೊದಲೆರಡು ಸ್ಥಾನ ಗಳಿಸಿದರು. 20 ವರ್ಷ ವಯಸ್ಸಿನ ನೀನಾ 28.38 ಸೆಕೆಂಡ್ಗಳಲ್ಲಿ ಗುರಿಮುಟ್ಟಿದರೆ, 14 ವರ್ಷ ವಯಸ್ಸಿನ ಧಿನಿಧಿ 28.80 ಸೆಕೆಂಡ್ಗಳಲ್ಲಿ ಗುರಿ ತಲುಪಿದರು. ಮಹಾರಾಷ್ಟ್ರದ ರುಜುಟ ರಾಜಾದ್ಯಾ (29.12ಸೆ) ಕಂಚಿನ ಪದಕ ಜಯಿಸಿದರು.
ಮಹಿಳೆಯರ 1500 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಕರ್ನಾಟಕ ಅದಿತಿ ಎನ್. ಮುಲಾಯ್ (18ನಿ.11.92ಸೆ) ಮತ್ತು ಶಿರೀನ್ (18.14.98ಸೆ) ಕ್ರಮವಾಗಿ ಬೆಳ್ಳಿ ಮತ್ತು ಕಂಚು ತಮ್ಮದಾಗಿಸಿಕೊಂಡರು. ದೆಹಲಿಯ ಭವ್ಯಾ ಸಚದೇವಾ (17ನಿ.42.81ಸೆ) ಚಿನ್ನ ಗೆದ್ದರು.
ಪುರುಷರ 400 ಮೀಟರ್ ಫ್ರೀಸ್ಟೈಲ್ನಲ್ಲಿ ಕರ್ನಾಟಕದ ಅನೀಶ್ ಎಸ್.ಗೌಡ (4ನಿ.0.45ಸೆ) ಬೆಳ್ಳಿ ಸಾಧನೆ ಮಾಡಿದರು. ದೆಹಲಿಯ ಕುಶಾಗ್ರ ರಾವತ್ (3ನಿ.57.89ಸೆ) ಮತ್ತು ಗುಜರಾತಿನ ಆರ್ಯನ್ ನೆಹ್ರಾ (4ನಿ.02.60ಸೆ) ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕಕ್ಕೆ ಮುತ್ತಿಕ್ಕಿದರು.
ಪುರುಷರ 50 ಮೀಟರ್ ಬಟರ್ಫ್ಲೈ ಸ್ಪರ್ಧೆಯಲ್ಲಿ ತಮಿಳುನಾಡಿನ ಬೆನೆಡಿಕ್ಟನ್ ರೋಹಿತ್ (24.39ಸೆ) ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಮಹಾರಾಷ್ಟ್ರದ ಮಹಿತ್ ಅಂಬ್ರೆ (25.02ಸೆ) ಮತ್ತು ಹರಿಯಾಣದ ಹರ್ಷ್ ಸರೋಹಾ (25.22ಸೆ) ಕ್ರಮವಾಗಿ ನಂತರದ ಸ್ಥಾನ ಪಡೆದರು.
ವಾಟರ್ ಪೋಲೊ ಸ್ಪರ್ಧೆಯಲ್ಲಿ ಕರ್ನಾಟಕದ ಪುರುಷರ ತಂಡ ಕೊನೆಗೂ ಜಯ ಸಾಧಿಸಿತು. ಮೊದಲೆರಡು ಪಂದ್ಯ ಸೋತಿದ್ದ ಕರ್ನಾಟಕ ತಂಡ 14–6ರಿಂದ ಪಂಜಾಬ್ ತಂಡವನ್ನು ಮಣಿಸಿತು. ಆದರೆ, ಮಹಿಳೆಯರ ತಂಡ ನಿರಾಸೆ ಮೂಡಿಸಿತು. 3–8ರಿಂದ ಕೇರಳ ತಂಡಕ್ಕೆ ಮಣಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.