ವಾರಣಾಸಿ: ಜಗತ್ತಿನ ಪ್ರಮುಖ ಧಾರ್ಮಿಕ ನಗರಗಳಿಗೆ 'ಆಧ್ಯಾತ್ಮಿಕ ಪ್ರಯಾಣ' ಕೈಗೊಂಡಿರುವ ಬಾಸ್ಕೆಟ್ಬಾಲ್ ಆಟಗಾರ ಡ್ವಿಟ್ ಹೊವಾರ್ಡ್ ಅವರು ಇತ್ತೀಚೆಗೆ ವಾರಣಾಸಿಗೆ ಭೇಟಿ ನೀಡಿದ್ದು, ನಗರವನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ.
ಈ ಸಂಬಂಧ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಅವರು, ವಾರಣಾಸಿಗೆ ಭೇಟಿ ನೀಡಿದ ನಂತರ ನನ್ನಲ್ಲಿ ಶಾಂತಿ ನೆಲೆಸಿದೆ. ಆಧ್ಯಾತ್ಮಿಕ ನಗರ ವಾರಣಾಸಿ ಬಗೆಗಿನ ಅದ್ಭುತವಾದ ಮಾಹಿತಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ವಾರಣಾಸಿ ಸಾಕಷ್ಟು ಜನರನ್ನು ಪ್ರೇರೇಪಿಸುತ್ತದೆ. ನಾನೂ ಕೃತಜ್ಞನಾಗಿದ್ದೇನೆ. ಪುನರುಜ್ಜೀವನಗೊಂಡಿರುವ ಈ ಪವಿತ್ರ ನಗರವು ಇನ್ನಷ್ಟು ಜನರಿಗೆ ಸ್ಫೂರ್ತಿ ನೀಡಲಿದೆ ಎಂದು ಬರೆದುಕೊಂಡಿದ್ದಾರೆ.
ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯೂ ಬಾಸ್ಕೆಟ್ಬಾಲ್ ಆಟಗಾರ ನಗರಕ್ಕೆ ಭೇಟಿ ನೀಡಿರುವುದನ್ನು ಖಚಿತಪಡಿಸಿದೆ.
'ವಿಶ್ವದ ಖ್ಯಾತ ಬಾಸ್ಕೆಟ್ಬಾಲ್ ಆಟಗಾರ ಮತ್ತು ಎನ್ಬಿಎ (ರಾಷ್ಟ್ರೀಯ ಬಾಸ್ಕೆಟ್ಬಾಲ್ ಸಂಸ್ಥೆ) ಚಾಂಪಿಯನ್ ಡ್ವಿಟ್ ಹೊವಾರ್ಡ್ ವಾರಣಾಸಿಗೆ ಭೇಟಿ ನೀಡಿದ್ದರು. ಆಧ್ಯಾತ್ಮಿಕ ಮತ್ತು ಪ್ರಾಚೀನ ಸಾಂಸ್ಕೃತಿಕ ನಗರಕ್ಕೆ ಭೇಟಿ ನೀಡಿದ್ದ ವೇಳೆ ಗಂಗಾ ಆರತಿಯಲ್ಲಿ ಪಾಲ್ಗೊಂಡು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ' ಎಂದುಇಲಾಖೆ ಟ್ವೀಟ್ ಮಾಡಿದೆ.
36 ವರ್ಷದ ಹೊವಾರ್ಡ್ ಅವರು, ಉತ್ತರ ಅಮೇರಿಕದ ವೃತ್ತಿಪರ ಬಾಸ್ಕೆಟ್ಬಾಲ್ ಲೀಗ್ ಆಗಿರುವಎನ್ಬಿಎಯಲ್ಲಿ 'ಲಾಸ್ ಎಂಜೆಲ್ಸ್ ಲೇಕರ್ಸ್' ತಂಡದ ಪರ ಆಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.