ಗ್ರೇಟರ್ ನೊಯ್ಡಾ: ಪವನ್ ಶೆರಾವತ್ ಮತ್ತು ನಾಯಕ ರೋಹಿತ್ ಕುಮಾರ್ ಅವರ ಅಮೋಘ ಆಟದ ನೆರವಿನಿಂದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ನಲ್ಲಿ ಗುರುವಾರ ಯು.ಪಿ.ಯೋಧಾವನ್ನು 37–27ರಿಂದ ಮಣಿಸಿತು.
ಪವನ್ 11 ಪಾಯಿಂಟ್ ಗಳಿಸಿದರೆ, ರೋಹಿತ್ ಏಳು ಮತ್ತು ಮಹೇಂದರ್ ಸಿಂಗ್ ಆರು ಪಾಯಿಂಟ್ ಕಲೆ ಹಾಕಿದರು. ಯೋಧಾದ ನಾಯಕ ರಿಷಾಂಕ್ ದೇವಾಡಿಗ ಐದು ಪಾಯಿಂಟ್ ಮತ್ತು ಪ್ರಶಾಂತ್ ಕುಮಾರ್ ರೈ ಮೂರು ಪಾಯಿಂಟ್ ಗಳಿಸಿದರು.
ದಬಂಗ್ ಡೆಲ್ಲಿಗೆ ಗೆಲುವು: ನವೀನ್ ಕುಮಾರ್ ಅವರ ಮಿಂಚಿನ ದಾಳಿಯ ಬಲದಿಂದ ದಬಂಗ್ ಡೆಲ್ಲಿ ತಂಡ 39–33ರಿಂದ ಹರಿಯಾಣ ಸ್ಟೀಲರ್ಸ್ ವಿರುದ್ಧ ಜಯಿಸಿತು. ನವೀನ್ ಕುಮಾರ್ ಅವರು ರೈಡ್ನಲ್ಲಿ ಏಳು ಪಾಯಿಂಟ್ ಗಳಿಸಿದರು. ಎರಡು ಬೋನಸ್ ಪಾಯಿಂಟ್ಸ್ಗಳನ್ನೂ ಕಲೆ ಹಾಕಿದರು. ಅವರಿಗೆ ಉತ್ತಮ ಜೊತೆ ನೀಡಿದ ಚಂದ್ರನ್ ರಂಜೀತ್, ಮೆರಾಜ್ ಶೇಖ್ ಅವರು ತಲಾ ಆರು ಅಂಕಗಳನ್ನು ಗಳಿಸಿದರು. ರವೀಂದ್ರ ಪೆಹಲ್ ಅವರು ಟ್ಯಾಕಲ್ನಲ್ಲಿ ಐದು ಮತ್ತು ಒಂದು ಬೋನಸ್ ಪಾಯಿಂಟ್ ತರುವ ಮೂಲಕ ತಂಡದ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿದರು.
ತಿರುಗೇಟು ನೀಡಲು ಪ್ರಯತ್ನಿಸಿದ ಹರಿಯಾಣ ತಂಡಕ್ಕೆ ಮೋನು ಗೊಯತ್ ಅವರು ಆಲ್ರೌಂಡ್ ಆಟವಾಡಿದರು. ರೇಡಿಂಗ್ನಲ್ಲಿ ಎಂಟು ಮತ್ತು ಟ್ಯಾಕಲ್ನಲ್ಲಿ ಮೂರು ಪಾಯಿಂಟ್ಸ್ ಗಳಿಸಿದರು. ಸುನಿಲ್ ಟ್ಯಾಕಲ್ನಲ್ಲಿ ನಾಲ್ಕು ಪಾಯಿಂಟ್ ಗಳಿಸಿದರು.
ಆದರೆ ಕೊನೆಯ ಹಂತದಲ್ಲಿ ರಕ್ಷಣಾ ಆಟಗಾರರು ದಬಂಗ್ ತಂಡದ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ವಿಫಲರಾದರು. ಇದರಿಂದಾಗಿ ಹರಿಯಾಣ ಸೋತಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.