ಅಹಮದಾಬಾದ್: ದ್ವಿತೀ ಯಾರ್ಧದಲ್ಲಿ ಪರಿಣಾಮಕಾರಿ ಆಟ ಆಡಿದ ಬೆಂಗಾಲ್ ವಾರಿಯರ್ಸ್ ತಂಡವು ಪ್ರೊ ಕಬಡ್ಡಿ ಲೀಗ್ ಏಳನೇ ಆವೃತ್ತಿಯ ಪಂದ್ಯದಲ್ಲಿ ಸೋಲಿನಿಂದ ಪಾರಾಯಿತು.
ಸೋಮವಾರ ನಡೆದ ತೆಲುಗು ಟೈಟನ್ಸ್ ಎದುರಿನ ಹಣಾಹಣಿಯಲ್ಲಿ ವಾರಿಯರ್ಸ್ 29–29 ಪಾಯಿಂಟ್ಸ್ನಿಂದ ಸಮಬಲ ಸಾಧಿಸಿತು.
ಬೆಂಗಾಲ್ ತಂಡದ ಮೊಹಮ್ಮದ್ ನಬಿಬಕ್ಷ್ ಎಂಟು ಪಾಯಿಂಟ್ಸ್ ಕಲೆಹಾಕಿ ಗಮನ ಸೆಳೆದರು. ಮಣಿಂದರ್ ಸಿಂಗ್ ಮತ್ತು ಕೆ.ಪ್ರಪಂಜನ್ ಅವರು ರೈಡಿಂಗ್ನಲ್ಲಿ ಮಿಂಚಿದರು. ಇವರು ಕ್ರಮವಾಗಿ ಐದು ಮತ್ತು ನಾಲ್ಕು ಪಾಯಿಂಟ್ಸ್ ಹೆಕ್ಕಿದರು.
ತೆಲುಗು ಟೈಟನ್ಸ್ ಪರ ಸೂರಜ್ ದೇಸಾಯಿ (7) ಮತ್ತು ಸಿದ್ದಾರ್ಥ್ ದೇಸಾಯಿ (4) ಮಿಂಚಿದರು. ಆರಂಭದಿಂದಲೇ ಉಭಯ ತಂಡಗಳು ಚುರುಕಿನ ಸಾಮರ್ಥ್ಯ ತೋರಿದವು. 15 ನಿಮಿಷಗಳ ಆಟ ಮುಗಿದಾಗ ಎರಡೂ ತಂಡಗಳು 7–7ರಿಂದ ಸಮ ಬಲ ಹೊಂದಿದ್ದವು. ನಂತರ ಟೈಟನ್ಸ್ 9–7ರಿಂದ ಮೇಲುಗೈ ಸಾಧಿಸಿತು. ಮೊದಲಾರ್ಧದ ಆಟ ಮುಗಿಯಲು ನಾಲ್ಕು ನಿಮಿಷ ಇದ್ದಾಗ ಬೆಂಗಾಲ್ ತಂಡದ ಆಟಗಾರ ಸೂಪರ್ ಟ್ಯಾಕಲ್ ಮಾಡಿ 9–9 ಸಮಬಲಕ್ಕೆ ಕಾರಣರಾದರು.
ಬುಲ್ಸ್ಗೆ ನಿರಾಸೆ: ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಯು.ಪಿ.ಯೋಧಾ 35–33ರಲ್ಲಿ ರೋಹಿತ್ ಕುಮಾರ್ ಸಾರಥ್ಯದ ಬುಲ್ಸ್ಗೆ ಸೋಲಿನ ರುಚಿ ತೋರಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.