
ಕರುಣ್ ನಾಯರ್ ಅವರ ಹೊಡೆತದ ಬಂಗಿ ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್ -Photo / KRISHNA KUMAR P S
ಬೆಂಗಳೂರು: ಗಾಯದಿಂದ ಚೇತರಿಸಿಕೊಂಡಿರುವ ಅನುಭವಿ ಬ್ಯಾಟರ್ ಕರುಣ್ ನಾಯರ್ ಅವರು ಇದೇ 6ರಿಂದ ನಡೆಯಲಿರುವ ಮುಂಬೈ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಸೇರಿಕೊಂಡಿದ್ದಾರೆ.
15 ಆಟಗಾರರ ತಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸೋಮವಾರ ಪ್ರಕಟಿಸಿದೆ. ದೇವದತ್ತ ಪಡಿಕ್ಕಲ್ ತಂಡವನ್ನು ಮುನ್ನಡೆಸಲಿದ್ದಾರೆ. ಕೆ.ಎಲ್. ರಾಹುಲ್ ಮತ್ತು ವೇಗಿ ಪ್ರಸಿದ್ಧ ಕೃಷ್ಣ ಅವರೂ ತಂಡದಲ್ಲಿದ್ದಾರೆ.
ಆಲೂರಿನಲ್ಲಿ ನಡೆದಿದ್ದ ಮಧ್ಯಪ್ರದೇಶ ವಿರುದ್ಧದ ಎಲೀಟ್ ಬಿ ಗುಂಪಿನ ಪಂದ್ಯದ ವೇಳೆ 34 ವರ್ಷದ ನಾಯರ್ ಎಡಗೈನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ, ಅವರು ಮೊಹಾಲಿಯಲ್ಲಿ ನಡೆದ ಪಂಜಾಬ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಮುಂಬೈನ ಬಿ.ಕೆ.ಸಿ ಮೈದಾನದಲ್ಲಿ ನಡೆಯುವ ಪಂದ್ಯಕ್ಕೆ ನಾಯರ್ ವಾಪಸಾಗಿರುವುದು ತಂಡದ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದೆ.
ತಂಡದ ನೂತನ ನಾಯಕ ಪಡಿಕ್ಕಲ್ (ಔಟಾಗದೇ 120) ಅವರ ಅಜೇಯ ಶತಕದ ನೆರವಿನಿಂದ ಎಂಟು ಬಾರಿಯ ಚಾಂಪಿಯನ್ ಕರ್ನಾಟಕ ತಂಡವು ಭಾನುವಾರ ಪಂಜಾಬ್ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್ಗೆ ಮುನ್ನಡೆದಿದೆ. ಕರ್ನಾಟಕ ತಂಡವು ಕೇವಲ 28 ಓವರ್ಗಳಲ್ಲಿ 5 ವಿಕೆಟ್ಗೆ 252 ರನ್ ಗಳಿಸಿ ಜಯ ಸಾಧಿಸಿತ್ತು.
ಗಾಯದ ಸಮಸ್ಯೆಯಿಂದಾಗಿ ವೈಶಾಖ ವಿಜಯಕುಮಾರ್ ತಂಡದಿಂದ ಹೊರಗುಳಿದಿದ್ದರೂ ಪ್ರಸಿದ್ಧಕೃಷ್ಣ ವೇಗದ ಬೌಲಿಂಗ್ ವಿಭಾಗದ ಬಲವನ್ನು ಹೆಚ್ಚಿಸಿದ್ದಾರೆ.
ತಂಡ ಹೀಗಿದೆ: ದೇವದತ್ತ ಪಡಿಕ್ಕಲ್ (ನಾಯಕ), ಮಯಂಕ್ ಅಗರವಾಲ್, ಕೆ.ಎಲ್.ರಾಹುಲ್, ಅನೀಶ್ ಕೆ.ವಿ, ಕರುಣ್ ನಾಯರ್, ಆರ್.ಸ್ಮರಣ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ವೆಂಕಟೇಶ್ ಎಂ, ವಿದ್ಯಾಧರ ಪಾಟೀಲ, ಪ್ರಸಿದ್ಧ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಶ್ರೀಜಿತ್ ಕೆ.ಎಲ್ (ವಿಕೆಟ್ ಕೀಪರ್), ವಿದ್ವತ್ ಕಾವೇರಪ್ಪ.
ಧ್ರುವ್ ವಾಪಸ್:
ಬ್ಯಾಟರ್ ಧ್ರುವ್ ಪ್ರಭಾಕರ್ ಅವರು ಫೆ.6ರಿಂದ ರಾಮನಗರದಲ್ಲಿ ಉತ್ತರಾಖಂಡ ವಿರುದ್ಧ ನಡೆಯುವ ಕರ್ನಲ್ ಸಿ.ಕೆ. ನಾಯ್ಡು ಟೂರ್ನಿಯ (23 ವರ್ಷದೊಳಗಿನ) ಪಂದ್ಯಕ್ಕಾಗಿ ಕರ್ನಾಟಕ ತಂಡಕ್ಕೆ ಮರಳಿದ್ದಾರೆ. ಅವರು ಪಂಜಾಬ್ ವಿರುದ್ಧದ ರಣಜಿ ಟ್ರೋಫಿ ಪಂದ್ಯಕ್ಕೆ ಸೀನಿಯರ್ ತಂಡಕ್ಕೆ ತೆರಳಿದ್ದರು.
ತಂಡ ಹೀಗಿದೆ: ಅನೀಶ್ವರ್ ಗೌತಮ್ (ನಾಯಕ), ಧ್ರುವ ಪ್ರಭಾಕರ್ (ಉಪನಾಯಕ), ಪ್ರಖರ್ ಚತುರ್ವೇದಿ, ಫೈಜಾನ್ ಖಾನ್ (ವಿಕೆಟ್ ಕೀಪರ್), ಕೆ.ಪಿ.ಕಾರ್ತಿಕೇಯ, ಹರ್ಷಿಲ್ ಧರ್ಮಾನಿ, ಹಾರ್ದಿಕ್ ರಾಜ್, ಯಶೋವರ್ಧನ್ ಪರಂತಪ್, ಮನ್ವಂತ್ ಕುಮಾರ್ ಎಲ್, ಧನುಷ್ ಗೌಡ, ಸಮಿತ್ ದ್ರಾವಿಡ್, ಕಾರ್ತಿಕ್ ಎಸ್.ಯು, ಶಶಿಕುಮಾರ್, ಸಂಜಯ್ ಅಶ್ವಿನ್ (ವಿಕೆಟ್ ಕೀಪರ್), ಮೊನೀಶ್ ರೆಡ್ಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.